ಹಿಂದೂ ಸಮಾಜದ ಬಹು ಕಾಲದ ನೋವು ಬೇಸರ ಸ್ಫೋಟಗೊಂಡಿದೆ- ಪೇಜಾವರ ಶ್ರೀ

Public TV
2 Min Read

ಉಡುಪಿ: ಹಿಂದೂ ಸಮಾಜ ಬಹಳ ಕಾಲದಿಂದ ನೋವನ್ನು ಉಂಡಿದೆ. ಹಲವಾರು ಅಹಿತಕರ ಘಟನೆಗಳಿಂದ ಹಿಂದೂ ಸಮಾಜ ಬಹಳ ನೋವಿನಲ್ಲಿದೆ. ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ನೇರ ಸಂದೇಶ ರವಾನೆ ಮಾಡಿದ್ದಾರೆ.

ಉಡುಪಿ ಪೇಜಾವರ ಮಠದ ರಾಮ ವಿಠಲ ಸಭಾಭವನದಲ್ಲಿ ಮುಸಲ್ಮಾನ ವರ್ತಕರು, ಮುಸ್ಲಿಂ ಮುಖಂಡರುಗಳು, ಕ್ರೈಸ್ತ ಧರ್ಮಗುರುಗಳು ಪೇಜಾವರ ಶ್ರೀಗಳನ್ನು ಭೇಟಿಯಾಗಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದರು. ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ. ನಿರಂತರವಾಗಿ ಅನ್ಯಾಯವಾದಾಗ ಬೇಸರ ನೋವು ಸ್ಫೋಟವಾಗುತ್ತದೆ. ಇದನ್ನೂ ಓದಿ: ವ್ಯಾಪಾರಕ್ಕೆ ಅವಕಾಶ ಕೊಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರಿಂದ ಮನವಿ

ಹಿಂದೂ ಸಮಾಜ ನೋವು ಉಂಡು ಉಂಡು ಬೇಸರವಾಗಿ ಇಂದು ಸ್ಫೋಟಗೊಂಡಿದೆ. ಮುಸಲ್ಮಾನರು ಮತ್ತು ಕ್ರೈಸ್ತ ಮುಖಂಡರು ವ್ಯಾಪಾರ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಸಮಾಜದಲ್ಲಿ ಶಾಂತಿ-ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯವಾಗಿ ಬೇಕು. ಆದರೆ ಅದು ಒಂದು ಗುಂಪಿನಿಂದ ಸಾಮರಸ್ಯ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು. ಹಿಂದೂ ಸಮಾಜಕ್ಕೆ ನೋವಾಗುವ ಯಾವುದೇ ಘಟನೆಗಳು ನಡೆಯದಿದ್ದರೆ ಸಾಮರಸ್ಯ ಬೆಳೆಯಬಹುದು. ಉಡುಪಿಯ ಗ್ರಾಮವೊಂದರ ವಿಧವೆ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಎಲ್ಲಾ ಹಸುಗಳನ್ನು ಕಳವು ಮಾಡಲಾಗಿದೆ. ಹಸುಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ಆ ಮಹಿಳೆ ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ. ಇಂತಹ ಅನೇಕ ಘಟನೆಗಳು ಸಮಾಜದಲ್ಲಿ ನಡೆದು ನೋವು ಮಡುಗಟ್ಟಿದೆ. ನಾವು ಕೂಡ ಇಂತಹ ಹಲವಾರು ನೋವನ್ನು ಅನುಭವಿಸಿದ್ದೇನೆ. ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು.

ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲಸಲು ಯಾರ ಮಧ್ಯಸ್ಥಿಕೆಯ ಬೇಡ. ಯಾರಿಂದ ಅನ್ಯಾಯವಾಗಿದೆ ಅವರು ಸಮಸ್ಯೆ ಸರಿ ಮಾಡಿಕೊಳ್ಳಬೇಕು. ತಪ್ಪು ಮಾಡಿದವರನ್ನು ಆ ಸಮಾಜದಲ್ಲಿ ಶಿಕ್ಷಿಸಲಿ. ಮಾಡಿದ ತಪ್ಪನ್ನು ಆ ಸಮಾಜ ಪ್ರತಿಭಟಿಸಲಿ. ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ. ತಪ್ಪಿತಸ್ಥರಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *