ಒಂದ್ಕಡೆ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಸೇರಿ ಪರ್ಯಾಯ ವಿಷ್ಣು ಸ್ಮಾರಕ (Vishnuvardhan Memorial) ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನೊಂದ್ಕಡೆ ವಿಷ್ಣು ಅಭಿಮಾನಿಗಳ ಸಂಘಟನೆಗಳು ಹೈಕೋರ್ಟ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿ ನೆಲಸಮವಾದ ಜಾಗದಲ್ಲೇ ಮರು ನಿರ್ಮಾಣ ಮಾಡಲು ಮುಂದಾಗಿದೆ.
ಸೋಮವಾರವಷ್ಟೇ ಹೈಕೋರ್ಟ್ಗೆ ವಿಷ್ಣುಸೇನೆಯು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅಭಿಮಾನ್ ಸ್ಟುಡಿಯೋದಲ್ಲಿ ಬೇರೆ ಕೆಲಸಗಳಿಗೂ ತಡೆಯಾಜ್ಞೆ ಹೇರಲಾಗಿದೆ. ಯಾವ ಉದ್ದೇಶಕ್ಕೆ ಸರ್ಕಾರ ಜಾಗ ನೀಡಿತ್ತೋ ಆ ಕೆಲಸಕ್ಕೆ ಉಪಯೋಗವಾಗದೆ ವ್ಯವಹಾರಿಕವಾಗಿ ಲಾಭದಾಸೆಗೆ ಬಾಲಣ್ಣ ಕುಟುಂಬ ಪ್ಲ್ಯಾನ್ ಮಾಡಿರೋದ್ರ ಕುರಿತಾಗಿಯೂ ಬೇಸರ ವ್ಯಕ್ತಪಡಿಸಲಾಗಿದೆ. ಜೊತೆಗೆ 10 ಗುಂಟೆ ಜಾಗವನ್ನ ವಾಪಸ್ ಪಡೆಯುವುದು, ಜೊತೆಗೆ ಸಮಾಧಿ ಮರುಸ್ಥಾಪನೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: ದಾದಾ ಫ್ಯಾನ್ಸ್ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ
ಇದೀಗ ಸ್ಮಾರಕ ತೆರವುಗೊಳಿಸಿ ಹತ್ತು ದಿನಗಳೇ ಉರುಳಿದೆ. ಹೀಗಾಗಿ, ಸೆಪ್ಟೆಂಬರ್ 18ರಂದು ನಡೆಯಬೇಕಿದ್ದ ವಿಷ್ಣುವರ್ಧನ್ 75ನೇ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನಿರಾಸೆಯೇ ಗತಿ. ಆದರೆ ಅಭಿಮಾನಿಗಳಿಗೆ ಕೊಂಚ ನಿರಾಳ ಅನ್ನೋ ಥರ ಕೆಂಗೇರಿ ಬಳಿಯೇ ನಯಾ ಸ್ಮಾರಕಕ್ಕೆ ವಿಷ್ಣುಸೇನೆ ತಯಾರಿ ನಡೆಸಿದೆ. ಅಭಿಮಾನಿಗಳ ಎಲ್ಲಾ ನಿರ್ಧಾರಕ್ಕೂ ಕುಟುಂಬ ಜೊತೆಯಾಗಿರೋದಾಗಿ ಹಿಂದೆಯೇ ಹೇಳಿತ್ತು. ಇದೀಗ ನಿರ್ಮಾಪಕ ಕೆ.ಮಂಜು ಮುಂದಾಳತ್ವದ ಇನ್ನೊಂದು ಬಣವೂ ಸಂಪೂರ್ಣ ಬೆಂಬಲ ಕೊಡೋದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಒಟ್ಟಿನಲ್ಲಿ ಸಮಾಧಿ ತೆರವು ಮಾಡಿರುವ ಜಾಗದಲ್ಲಿ ಸಮಾಧಿ ಮರುಸ್ಥಾಪನೆ ಹಾಗೂ ಪರ್ಯಾಯ ಸ್ಮಾರಕ ಸ್ಥಾಪನೆಯೂ ಜಂಟಿಯಾಗಿ ನಡೆಯುತ್ತಿದೆ.