ಮಗನ ಮದುವೆಗೆ ಕೇವಲ 18 ಸಾವಿರ ರೂ. ವೆಚ್ಚ – ಐಎಎಸ್ ಅಧಿಕಾರಿ ನಿರ್ಧಾರ

Public TV
2 Min Read

-ಒರ್ವ ಅತಿಥಿಗೆ 10 ರೂ. ಖರ್ಚು

ವಿಶಾಖಪಟ್ಟಣಂ: ವಿವಾಹವನ್ನು ಅದ್ಧೂರಿಯಾಗಿ ಮಾಡಲು ಅನೇಕರು ಲಕ್ಷಾಂತರ ರೂ. ವೆಚ್ಚ ಮಾಡುತ್ತಾರೆ. ಆದರೆ ಐಎಎಸ್ ಅಧಿಕಾರಿಯೊಬ್ಬರು ಕೇವಲ 18 ಸಾವಿರ ರೂ. ವೆಚ್ಚದಲ್ಲಿ ಮಗನ ಮದುವೆಯನ್ನು ಮಾಡಲು ನಿರ್ಧರಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ವಿಎಂಆರ್ ಡಿಎ) ಆಯುಕ್ತ ಪಿ. ಬಸಂತ್ ಕುಮಾರ್ ಅವರು ಇಂತಹ ಸರಳ ವಿವಾಹಕ್ಕೆ ಮುಂದಾಗಿದ್ದಾರೆ. ಈ ವಿವಾಹ ವಿಶಾಖಪಟ್ಟಣದಲ್ಲಿ ಫೆಬ್ರವರಿ 10 ರಂದು ನಡೆಯಲಿದೆ.

ಪಿ. ಬಸಂತ್ ಕುಮಾರ್ ಅವರು 2017ರ ಸೆಪ್ಟೆಂಬರ್ ನಲ್ಲಿ ನಡೆದ ಪುತ್ರಿ ವಿವಾಹಕ್ಕೂ ಕೇವಲ 16,100 ಖರ್ಚು ಮಾಡಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ತಮ್ಮ ಮದುವೆಗೂ ಬಸಂತ್ ಅವರು 2,345 ರೂ. ವೆಚ್ಚ ಮಾಡಿದ್ದಾರೆ. ಐಎಎಸ್ ಅಧಿಕಾರಿಯಾಗಿ ಈ ರೀತಿಯ ಸರಳ ಮದುವೆ ಮಾಡುವ ಮೂಲಕ ಬಸಂತ್ ಅವರು ಅನೇಕರಿಗೆ ಮಾದರಿಯಾಗಿದ್ದಾರೆ.

1988ರಲ್ಲಿ ನಾನು ಸರಳ ವಿವಾಹವಾಗುತ್ತೇನೆ ಎಂದು ಪತ್ನಿಯ ಪೋಷಕರಿಗೆ ತಿಳಿಸಿದ್ದೆ. ಅವರು ಕೆಲವು ವಾರಗಳ ಕಾಲ ಸಮಯ ತೆಗೆದುಕೊಂಡು ಯೋಚಿಸಿ ಒಪ್ಪಿಗೆ ಸೂಚಿಸಿದರು. ಹೀಗಾಗಿ ನಾನು ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದೆ. ಆಗ ಕೇವಲ 25 ಅತಿಥಿಗಳು ಭಾಗವಹಿಸಿದ್ದರಿಂದ 2,345 ರೂ. ಖರ್ಚು ಮಾಡಿದ್ದೇವು ಎಂದು ಪಿ.ಬಸಂತ್ ಕುಮಾರ್ ತಮ್ಮ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.

ವಿಶಾಖಪಟ್ಟಣನಲ್ಲಿ ಫೆಬ್ರವರಿ 10ರಂದು ನಡೆಯುತ್ತಿರುವ ಪುತ್ರನ ಮದುವೆಯನ್ನು ಸಹೋದ್ಯೋಗಿಗಳು ಹಾಗೂ ರಾಧಾ ಸೋಮಿ ಸತ್ಯಂಗ ಸಭಾ ಸದಸ್ಯರ ಸಹಾಯದಿಂದ ಮಾಡುತ್ತಿರುವೆ. ಒಂದು ವೇಳೆ ಅವರ ಸಹಾಯವಿಲ್ಲದಿದ್ದರೆ 18 ಸಾವಿರ ರೂ. ವೆಚ್ಚದಲ್ಲಿ ವಿವಾಹ ನೆರವೇರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಮದುವೆಗೆ ಬೇಕಾಗುವ ತರಕಾರಿಯನ್ನು ವಿಶಾಖಪಟ್ಟಣದ ದಯಾಳ್‍ಬಾಗ್ ನಗರದ ತೋಟದಿಂದ ತರಲಾಗುತ್ತದೆ. ಮದುವೆ ನಿಮಿತ್ತ ಫೆಬ್ರವರಿ 8ರಂದು ಸತ್ಸಂಗ ನೆಡೆಸುತ್ತೇವೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಕೇವಲ 10 ರೂ. ವೆಚ್ಚ ಮಾಡಲಾಗುತ್ತದೆ. ಮದುವೆಯ ದಿನ 200 ಜನ ಸಂಬಂಧಿಕರು ಸೇರಲಿದ್ದು, ತಲಾ 7 ರೂ. ವೆಚ್ಚದಲ್ಲಿ ಅವರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಆಂಧ್ರಪ್ರದೇಶದ ಗವರ್ನರ್ ಇಎಸ್‍ಎಲ್ ನರಸಿಂಹನ್ ಅವರು ವಿವಾಹಕ್ಕೆ ಆಗಮಿಸಲಿದ್ದಾರೆ ಎಂದು ಆಯುಕ್ತ ಪಿ. ಬಸಂತ್ ಕುಮಾರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *