ಕಾರ್ಗಿಲ್ ಹುತಾತ್ಮ ಯೋಧನ ಮಗಳ ಈ ಹಳೇ ಪೋಸ್ಟ್ ಗೆ ಸೆಹ್ವಾಗ್ ಪ್ರತಿಕ್ರಿಯಿಸಿದ್ದು ಹೀಗೆ

Public TV
2 Min Read

ನವದೆಹಲಿ: ರಾಮ್‍ಜಸ್ ಕಾಲೇಜಿನಲ್ಲಿ ಕಳೆದ ಬುಧವಾರ ನಡೆದ ಗಲಾಟೆಯ ನಂತರ ಕಾರ್ಗಿಲ್ ಹುತಾತ್ಮ ಯೋಧನ ಮಗಳು ಹಾಗು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗುರ್‍ಮೆಹರ್ ಕೌರ್ ಅವರ ಫೇಸ್‍ಬುಕ್ ಪೋಸ್ಟ್ ವೈರಲ್ ಆಗಿದ್ದು, ಇದೀಗ ವೀರೇಂದ್ರ ಸೆಹ್ವಾಗ್ ಹಾಗೂ ನಟ ರಂದೀಪ್ ಹೂಡಾ, ಕೌರ್ ಅವರ ಹಳೆಯ ಫೋಟೋವೊಂದನ್ನ ಉದ್ದೇಶಿಸಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮೇನಲ್ಲಿ ವೈರಲ್ ಆಗಿದ್ದ ಗುರುಮೆಹರ್ ಕೌರ್ ಅವರ ವೀಡಿಯೋವೊಂದರಲ್ಲಿ ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿದ್ದು ಎಂಬ ಭಿತ್ತಿಪತ್ರ ಹಿಡಿದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ಸಿಕ್ಕಿದ್ದು ಕ್ರಿಕೆಟರ್ ವೀರೆಂದ್ರ ಸೆಹ್ವಾಗ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸೆಹ್ವಾಗ್ ತಮ್ಮ ಟ್ವೀಟ್‍ನಲ್ಲಿ ಗುರುಮೆಹರ್ ಅವರನ್ನಾಗಲೀ ಅಥವಾ ರಾಮ್‍ಜಸ್ ಕಾಲೇಜಿನಲ್ಲಿ ನಡೆದ ಗಲಾಟೆಯನ್ನಾಗಲೀ ನೇರವಾಗಿ ಉದ್ದೇಶಿಸಿ ಹೇಳಿಲ್ಲ. ಬದಲಿಗೆ ಗುರುಮೆಹರ್ ಅವರ ಶೈಲಿಯಲ್ಲೇ, ಎರಡು ತ್ರಿಶತಕ ಬಾರಿಸಿದ್ದು ನಾನಲ್ಲ, ನನ್ನ ಬ್ಯಾಟ್ ಬಾರಿಸಿದ್ದು ಎಂಬ ಭಿತ್ತಿಪತ್ರ ಹಿಡಿದ ಫೋಟೋವೊಂದನ್ನ ಹಾಕಿದ್ದಾರೆ. ಜೊತೆಗೆ ಬಾತ್ ಮೆ ಹೈ ದಮ್ #BharatJaisiJagahNahi  (ಭಾರತ್‍ ಜೈಸಿ ಜಗಾ ನಹೀ) ಅಂತ ಟ್ವೀಟ್ ಮಾಡಿದ್ದಾರೆ. ಸೆಹ್ವಾಗ್ ಅವರ ಈ ಟ್ವೀಟ್‍ಗೆ ನಟ ರಂದೀಪ್ ಹೂಡಾ ಚಪ್ಪಾಳೆ ತಟ್ಟೋ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದಾರೆ. ಇತರೆ ಟ್ವಿಟ್ಟರ್ ಬಳಕೆದಾರರು ಕೂಡ ಇದೇ ಮಾದರಿಯಲ್ಲಿ ಟ್ರೋಲ್ ಮಾಡಿದ್ದು, ಇದೀಗ ಪರ ವಿರೋಧ ಚರ್ಚೆ ನಡೆಯುತ್ತಿದೆ.

ಕಳೆದ ಬುಧವಾರ ದೆಹಲಿಯ ರಾಮ್‍ಜಸ್ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘ(ಎಐಎಸ್‍ಎ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಜೆಎನ್‍ಯು ವಿದ್ಯಾರ್ಥಿಗಳಾದ ಉಮರ್ ಖಲೀದ್ ಹಾಗೂ ಶೆಹ್ಲಾ ರಷೀದ್‍ರನ್ನು ಕಲ್ಚರ್ ಆಫ್ ಪ್ರೊಟೆಸ್ಟ್ಸ್ ಎಂಬ ಸೆಮಿನಾರ್ ನೀಡಲು ಆಹ್ವಾಸಲಾಗಿತ್ತು. ಇದಕ್ಕೆ ಅಬಿವಿಪಿ ವಿರೋಧ ವ್ಯಕ್ತಪಡಿಸಿದ್ದೇ ಈ ಗಲಾಟೆಗೆ ಕಾರಣವಾಗಿದೆ.

ಇದಾದ ಬಳಿಕ ಗುರ್‍ಮೆಹರ್ ಕೌರ್, ನಾನು ಎಬಿವಿಪಿಗೆ ಹೆದರುವುದಿಲ್ಲ. ನಾನು ಒಂಟಿಯಲ್ಲ, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ನನ್ನ ಜೊತೆಗಿದ್ದಾರೆ ಎಂಬ ಭಿತ್ತಿಪತ್ರ ಹಿಡಿದಿರುವ ಫೋಟೋವನ್ನ ಫೇಸ್‍ಬುಕ್ ಪ್ರೊಫೈಲ್ ಪಿಕ್ಚರ್ ಮಾಡಿದ್ದರು. ನಂತರ ಈ ಫೋಟೋ ವೈರಲ್ ಆಗಿತ್ತು. ಗುರ್‍ಮೆಹರ್ ಅವರ ಈ ಫೋಟೋಗೆ ನಾಲ್ಕು ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಹಾಗೂ 1 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದ್ದು, 3 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

ಇದನ್ನೂ ಓದಿ: ಎಬಿವಿಪಿ ವಿರುದ್ಧ ಮಾತಾಡಿದ್ದಕ್ಕೆ ಕಾರ್ಗಿಲ್ ಹುತಾತ್ಮ ಯೋಧನ ಮಗಳಿಗೆ ಅತ್ಯಾಚಾರದ ಬೆದರಿಕೆ

ಪಾಕಿಸ್ತಾನ ವಿರುದ್ಧ ಮುಲ್ತಾನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಸೆಹ್ವಾಗ್ ಬಿರುಸಿನ ತ್ರಿಶತಕ ಬಾರಿಸಿದ್ದರು. 375 ಎಸೆತಗಳಲ್ಲಿ 309 ರನ್ ಚಚ್ಚಿದ್ದರು. ಈ ಅಮೋಘ ಇನ್ನಿಂಗ್ಸ್ ನಲ್ಲಿ ಸೆಹ್ವಾಗ್ 39 ಬೌಂಡರಿ, 6 ಸಿಕ್ಸರ್ ಹೊಡೆದಿದ್ದರು. ಈ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 52 ರನ್‍ಗಳಿಂದ ಭಾರತ ಗೆದ್ದುಕೊಂಡಿತ್ತು.

 

Share This Article
Leave a Comment

Leave a Reply

Your email address will not be published. Required fields are marked *