ವಿರಾಟ್ ಅಣ್ಣನ ಸಲಹೆ ಸಹಾಯವಾಯ್ತು – RCB ಗೆಲುವಿನ ನಂತ್ರ ಮಂದಾನ ಮುಖದಲ್ಲಿ ಮಂದಹಾಸ

Public TV
2 Min Read

– ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷ್

ಮುಂಬೈ: ಸತತ ಸೋಲಿನಿಂದ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಮೊದಲ ಗೆಲುವು ದಾಖಲಿಸಿದೆ.

ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಬುಧವಾರ ಯುಪಿ ವಾರಿಯರ್ಸ್ (UP Warriorz) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಗೆಲುವಿನ ನಗೆ ಬೀರಿದೆ. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್‌, ಬೌಂಡರಿ – ಆರ್‌ಸಿಬಿ ಬಹುತೇಕ ಟೂರ್ನಿಯಿಂದ ಔಟ್‌

ಪಂದ್ಯದ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ (Smriti Mandhana), ಕೊಹ್ಲಿ (Virat Kohli) ಅಣ್ಣನ ಸಲಹೆಗಳು ಗೆಲುವಿಗೆ ತುಂಬಾ ಸಹಾಯವಾಯಿತು. ಪಂದ್ಯ ಆರಂಭಕ್ಕೂ ಮುನ್ನ ನಮ್ಮ ತಂಡದೊಂದಿಗೆ ಮಾತನಾಡಿದ್ದರು. ತಮ್ಮ 15 ವರ್ಷದ ಅನುಭವ ಹಂಚಿಕೊಳ್ಳುತ್ತಾ ನಮ್ಮಲ್ಲಿ ಉತ್ಸಾಹ ತುಂಬಿದರು. ಇದರೊಂದಿಗೆ ಆರ್‌ಸಿಬಿ ತಂಡದ ಪ್ರತಿಯೊಬ್ಬರ ಆಲ್‌ರೌಂಡ್ ಪ್ರದರ್ಶನವೂ ಗೆಲುವಿಗೆ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ.

ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಆರ್‌ಸಿಬಿ ತಂಡ 19.3 ಓವರ್‌ಗಳಲ್ಲಿ 135 ರನ್‌ಗಳಿಗೆ ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 136 ರನ್‌ಗಳ ಗುರಿ ಪಡೆದ ಆರ್‌ಸಿಬಿ, 18 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಗೆಲುವು ಸಾಧಿಸಿತು. ಕನಿಕಾ ಅಹುಜಾ 46 ರನ್, ರಿಚಾ ಘೋಷ್ 31 ರನ್ ಹಾಗೂ ಹೀದರ್ ನೈಟ್ 24 ರನ್ ಚಚ್ಚಿ ತಂಡದ ಗೆಲುವಿಗೆ ನೆರವಾದರು.

ಆಲ್‌ರೌಂಡರ್ ಎಲ್ಲಿಸ್ ಪರ‍್ರಿ (Ellyse Perry) 4 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 3 ವಿಕೆಟ್ ಕಿತ್ತರು. ಸೋಫಿ ಡಿವೈನ್, ಸೋಭಾನಾ ಆಶಾ ತಲಾ 2 ವಿಕೆಟ್ ಪಡೆದರೆ, ಮೆಗ್ ಶೂಟ್ ಹಾಗೂ ಶ್ರೇಯಾಂಕ ಪಾಟೀಲ್ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ

ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಆರ್‌ಸಿಬಿ ಮೊದಲ ಗೆಲುವಿನ ಬಳಿಕ ಅಭಿಮಾನಿಗಳು ಸಂತಸಗೊಂಡಿದ್ದಾರೆ. ನಾಯಕಿ ಸ್ಮೃತಿ ಮಂದಾನ ಮುಖದಲ್ಲೂ ಮಂದಹಾಸ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *