ಮಳೆಗಾಗಿ ದೇವರ ಮುಂದೆ ಧರಣಿ ಕುಳಿತ ಗ್ರಾಮಸ್ಥರು

Public TV
1 Min Read

ಕೊಪ್ಪಳ: ಮೊಹರಂ ಕೊನೆ ದಿನವಾದ ಮಂಗಳವಾರ ಕೊಪ್ಪಳದ ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ.

ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಮೊಹರಂ ಕೊನೆ ದಿನದ ನಿಮಿತ್ತ ದೇವರನ್ನು ವಿಸರ್ಜನೆ ಮಾಡಲು ಹೋಗುವ ವೇಳೆ ಗ್ರಾಮಸ್ಥರು ಅಡ್ಡಗಟ್ಟಿ ಧರಣಿ ಕೂತಿದ್ದರು. ನೀರು ತುಂಬಿದ ಐದು ಕೊಡವನ್ನು ದೇವರ ಮುಂದೆ ಇಟ್ಟು ಗ್ರಾಮಸ್ಥರು ವರ ಕೇಳಿದ್ದರು. ಮಳೆ ಬರುವುದಾದರೆ ತಲೆ ಮೇಲೆ ನೀರು ಹಾಕು, ಬರುವುದಿಲ್ಲ ಎಂದಾದರೆ ನಮ್ಮನ್ನು ದಾಟಿಕೊಂಡು ಹಾಗೆ ಹೋಗು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಮಳೆ ಬರುತ್ತಾ ಇಲ್ವಾ ಎಂದು ಹೇಳಿ ಹೋಗು ಎಂದು ಪಟ್ಟು ಹಿಡಿದು ರಸ್ತೆಯಲ್ಲಿ ಧರಣಿ ಕುಳಿತಿದ್ದರು.

ಈ ವೇಳೆ ಮೊಲಾಲಿ ದೇವರನ್ನು ಹೊತ್ತಿದ್ದವರು ಕೊಡದಲ್ಲಿದ್ದ ನೀರನ್ನು ಎತ್ತಿ ಸುರಿದುಕೊಂಡು ಮಳೆಯ ಮುನ್ಸೂಚನೆ ಕೊಟ್ಟು ಮುಂದೆ ಸಾಗಿದರು. ಈ ಮೂಲಕ ಗ್ರಾಮಸ್ಥರು ಬೇಡಿಕೆಗೆ ಮೊಲಾಲಿ ದೇವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗ್ರಾಮದಲ್ಲಿ ಮಳೆಯಾಗದೆ ಭತ್ತ, ನಾಟಿ ಕಾರ್ಯ ಆರಂಭವಾಗದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಈಗ ದೇವರ ಮಳೆಯ ಮುನ್ಸೂಚನೆ ನೀಡುರುವ ಪರಿಣಾಮ ಗುಂಡೂರು ಗ್ರಾಮಸ್ಥರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *