ರಾಯಚೂರು: ಕಲುಷಿತ ನೀರು ಕುಡಿದು ಚರ್ಮ ರೋಗಕ್ಕೆ ತುತ್ತಾದ ಗ್ರಾಮಸ್ಥರು

Public TV
1 Min Read

ರಾಯಚೂರು: ರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿದೆ. ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಆದ್ರೆ ಈ ಜಿಲ್ಲೆಯಲ್ಲಿ ನೀರಿದ್ರೂ ಜನರು ಪರದಾಡುವಂತಾಗಿದೆ. ನೀರನ್ನು ಕುಡಿದು ಚರ್ಮರೋಗಕ್ಕೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.

ಹೌದು. ರಾಯಚೂರು ತಾಲೂಕಿನ ಕೃಷ್ಣಾನದಿ ತಟದ ಆತ್ಕೂರು ಗ್ರಾಮದ ಜನ ನೀರು ಕುಡಿದ ಪರಿಣಾಮ ಮೈಮೇಲೆ ಕಲೆ, ಚರ್ಮರೋಗದ ಲಕ್ಷಣಗಳು ಕಂಡುಬಂದಿದೆ. ಇವರಿಗೆ ಕೃಷ್ಣಾ ನದಿಯ ನೀರೇ ಆಧಾರ. ಆದ್ರೆ ಈಗ ಕೃಷ್ಣೆ ಮಲೀನವಾಗಿದ್ದು, ಮೀನು, ಮೊಸಳೆ ಸೇರಿ ಹಲವು ಜಲಚರಗಳು ಸಾವನ್ನಪ್ಪಿ ಗಬ್ಬು ವಾಸನೆ ಬರ್ತಿದೆ. ಇದರ ಜೊತೆಗೆ ಆರ್‍ಟಿಪಿಎಸ್ ಮತ್ತು ವಿವಿಧ ಕಾರ್ಖಾನೆಗಳ ರಾಸಾಯನಿಕಯುಕ್ತ ನೀರು ನದಿಗೆ ಸೇರಿ ನೀರು ಮಲಿನಗೊಂಡಿದೆ.

ಜಿಲ್ಲಾಡಳಿತವಾಗಲಿ, ಜಿಲ್ಲಾಪಂಚಾಯ್ತಿಯಾಗಲಿ ಇದುವರೆಗೆ ಕುಡಿಯುವ ನೀರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ. ಬೋರ್‍ವೆಲ್‍ಗಳ ನೀರಲ್ಲಿ ಫ್ಲೋರೈಡ್ ಅಂಶ ಇರುವುದರಿಂದ ಜನ ನದಿ ನೀರನ್ನೆ ಅವಲಂಬಿಸಿದ್ದಾರೆ. ಇದ್ರಿಂದ ಕೈ, ಕಾಲು, ಹೊಟ್ಟೆ, ತೊಡೆ ಭಾಗದಲ್ಲಿ ಬಿಳಿ ಮಚ್ಚೆ, ಸುಟ್ಟಗಾಯದ ರೀತಿಯಲ್ಲಿ ಚರ್ಮರೋಗ ಕಾಣಿಸಿಕೊಂಡಿದೆ. ಗ್ರಾಮದ ಒಟ್ಟು 2000 ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಚರ್ಮರೋಗದಿಂದ ಬಳಲುತ್ತಿದ್ದಾರೆ.

ಆತ್ಕೂರು ಮಾತ್ರವಲ್ಲದೆ ಕೃಷ್ಣಾನದಿ ದಡದ ರಾಂಪೂರ, ಬೂರ್ದಿಪಾಡ್, ಸರ್ಜಾಪೂರ ಗ್ರಾಮಗಳಲ್ಲೂ ಜನ ಚರ್ಮರೋಗದಿಂದ ತತ್ತರಿಸಿಹೋಗಿದ್ದಾರೆ. ಜಿಲ್ಲಾಡಳಿತ ಜನರಿಗೆ ಶುದ್ಧ ನೀರಿನ ವ್ಯವಸ್ಥೆಯನ್ನು ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *