ಚಿಕ್ಕಬಳ್ಳಾಪುರ: ವಿಷಯುಕ್ತ ಗಾಳಿಯನ್ನು ಹೊರಸೂಸುತ್ತಿರುವ ಕಾರ್ಖಾನೆಯನ್ನು ಸ್ಥಳಾಂತರಿಸುವಂತೆ ದೇವನಹಳ್ಳಿಯ ಬೈರಾಪುರ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ದೇವನಹಳ್ಳಿಯ ಬೈರಾಪುರ ಗ್ರಾಮ ಈಗ ಬದುಕಲು ಅಸಾಧ್ಯವಾದ ವಿಷಕಾರಿ ಗ್ರಾಮವಾಗಿ ಪರಿವರ್ತಿತವಾಗಿದೆ. ಇದಕ್ಕೆ ಕಾರಣ ಅಲ್ಲಿ 42 ವರ್ಷಗಳ ಹಿಂದೆ ಆರಂಭವಾಗಿರುವ ಆಪಾಯಕಾರಿ ಕಾರ್ಖಾನೆ.
ರೆಡ್ ಸ್ಕೇಲ್ ಇಂಡಸ್ಟ್ರಿ ವ್ಯಾಪ್ತಿಗೆ ಬರೋ ಈ ಕಾರ್ಖಾನೆ ತಯಾರಿಸುವ ಈ ರಾಸಾಯನಿಕದಿಂದಾಗಿ ಗ್ರಾಮದಲ್ಲಿ ಜನರೇ ವಾಸಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಿ ಪಾಷಾಣ, ಕಾಳು ಮಾತ್ರೆಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಇದು ಹೊರಸೂಸುವ ವಿಷ ಗಾಳಿಯಿಂದ ಇಡೀ ಗ್ರಾಮವೇ ವಿಷಪೂರಿತ ಗ್ರಾಮವಾಗಿ ಪರಿವರ್ತಿತವಾಗುತ್ತಿದೆ. ಕಾರ್ಖಾನೆಯಲ್ಲಿ ಬಳಸಲಾಗುವ ಅಪಾಯಕಾರಿ ಅಲ್ಯೂಮಿನಿಯಂ ಪಾಸ್ಪೈನ್ ಮಿಶ್ರಿತ ಗಾಳಿ ಸೇವಿಸಿ ಪ್ರತಿ ವರ್ಷ ಹಲವಾರು ಜನರು ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ಕಾರ್ಖಾನೆಯನ್ನು ಸ್ಥಳಾಂತರಿಸಬೇಕೆಂದು ಗ್ರಾಮದ ಜನತೆ ಈಗ ಪಟ್ಟು ಹಿಡಿದಿದ್ದಾರೆ.
ಸರ್ಕಾರಕ್ಕೆ ಮನವಿ: ಸತತ 4 ವರ್ಷಗಳಿಂದಲೂ ಕಾರ್ಖಾನೆ ಸ್ಥಳಾಂತರಕ್ಕೆ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕಾರ್ಖಾನೆಯನ್ನಾದರೂ ಸ್ಥಳಾಂತರಿಸಿ ಇಲ್ಲವೇ ಗ್ರಾಮವನ್ನಾದರೂ ಸ್ಥಳಾಂತರಿಸಿ ಎಂದು ಗ್ರಾಮಸ್ಥರು ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ.
ಈ ಹಿಂದೆ ತಮಿಳುನಾಡಿನ ತೂತುಕುಡಿ ಗ್ರಾಮದಲ್ಲಿ ಇಂಥದೊಂದು ಘಟನೆ ನಡೆದಿತ್ತು. ಅಲ್ಲಿನ ವಿಷಪೂರಿತ ಗಾಳಿಯನ್ನು ಸೂಸುವ ಕೈಗಾರಿಕೆ ಸ್ಥಳಾಂತರಕ್ಕಾಗಿ ದೊಡ್ಡ ಹೋರಾಟವೇ ನಡೆದಿತ್ತು. ಅಂತೆಯೇ ಈಗ ಕರ್ನಾಟಕದ ಬೈರಾಪುರ ಗ್ರಾಮದಲ್ಲಿಯೂ ಹೋರಾಟ ನಡೆಯಬೇಕೇ? ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕಾರ್ಖಾನೆಯ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.