ವಿಕ್ರಮ್ ಗೌಡ ಮುಗ್ಧ, ಗೌರಿಯನ್ನು ಕೊಲೆ ಮಾಡಲು ಸಾಧ್ಯವಿಲ್ಲ: ನೂರ್ ಶ್ರೀಧರ್

Public TV
2 Min Read

ಬೆಂಗಳೂರು: ವಿಕ್ರಮ್ ಗೌಡ ಓರ್ವ ಆದಿವಾಸಿ ಯುವಕನಾಗಿದ್ದು ಯಾವುದೇ ಕಾರಣಕ್ಕೂ ಆತ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಲು ಸಾಧ್ಯವಿಲ್ಲ ಎಂದು ನೂರ್ ಶ್ರೀಧರ್ ಹೇಳಿದ್ದಾರೆ.

ಗೌರಿ ಹತ್ಯೆಯನ್ನು ನಕ್ಸಲರು ಮಾಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಇಂದೂ ಕೂಡ ಎಲ್ಲಾ ನಕ್ಸಲಿಯರಿಗೂ ಗೌರಿ ಮೇಲೆ ಅಭಿಮಾನವಿದೆ. ಆದರೆ ಈಗ ಸದ್ಯ ವಿಕ್ರಮ್‍ಗೌಡ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಈತ ಮುಗ್ಧನಾಗಿದ್ದು, ಯಾವುದೇ ಕಾರಣಕ್ಕೂ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಗೌರಿ ಹತ್ಯೆಯಲ್ಲಿ ಸಂಘ ಪರಿವಾರದ ಪಾತ್ರ ನೇರವಾಗಿದೆ. ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಪರಿಷತ್ ನಲ್ಲಿ ಸಂಘ ಪರಿವಾರದವರು ಮಾತನಾಡಲು ಅವಕಾಶ ನೀಡಿರಲಿಲ್ಲ. ಈಗ ಕೂಡ ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿದ್ದಾರೆ. ಸದ್ಯ ತನಿಖೆ ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿರುವವರನ್ನು ತನಿಖೆ ಮಾಡಬೇಕು. ಆರ್‍ಎಸ್‍ಎಸ್ ಕಚೇರಿಯಿಂದಲೇ ತನಿಖೆ ಆರಂಭವಾಗಬೇಕು ಎಂದು ನೂರ್ ಶ್ರೀಧರ್ ಆಗ್ರಹಿಸಿದರು.

ಭಾರೀ ಒತ್ತಡದ ನಡುವೆ ಈ ಪತ್ರಿಕಾಗೋಷ್ಠಿ ನಡೆಸುತ್ತಿದ್ದು ನಮ್ಮ ಮೇಲೆ ಕೂಡ ಕೊಲೆ ಬೆದರಿಕೆ ಇದೆ. ಆದರೆ ಸತ್ಯವನ್ನು ತಿಳಿಸಲು ನಿಮ್ಮ ಮುಂದೆ ಬಂದಿದ್ದೇವೆ. ನಕ್ಸಲ್ ಕೂಟ ಮಾಫಿಯಾ ಕೂಟವಲ್ಲ. ಇದು ಕೂಡ ರಾಜಕೀಯ ಪಕ್ಷವಾಗಿದ್ದು ಆದ್ರೆ ಭೂಗತವಾಗಿ ಕೆಲಸ ಮಾಡುತ್ತದೆ. ಸದ್ಯ ದೇಶಾದ್ಯಂತ ಐವತ್ತಕ್ಕೂ ಹೆಚ್ಚು ನಕ್ಸಲ್ ಗುಂಪುಗಳಿದ್ದು ಗೌರಿ ಹತ್ಯೆಯಲ್ಲಿ ಭಾಗಿಯಾಗಿರಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

ನಕ್ಸಲರು ಹತ್ಯೆ ಮಾಡಿದ್ದೆ ಆಗಿದ್ದರೆ ಅಲ್ಲಿ ಕರ ಪತ್ರ ಸಿಗುತ್ತದೆ ಅಥವಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಇಲ್ಲಿ ಆ ರೀತಿಯ ಯಾವುದೇ ಸುಳಿವು ಸಿಕ್ಕಿಲ್ಲ. ನಕ್ಸಲರ ಇತಿಹಾಸದಲ್ಲಿ ಇದೂವರೆಗೆ ಯಾವುದೇ ಪತ್ರಕರ್ತರ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಗೌರಿಯನ್ನು ಕೊಲ್ಲಲು ಯಾವುದೇ ವಿವಾದವಾಗಲಿ ಅಥವ ನಕ್ಸಲರ ಜೊತೆ ಯಾವುದೇ ವೈಷಮ್ಯವಾಗಲಿ ಇರಲಿಲ್ಲ. ಬೇರೆಯವರ ತಪ್ಪನ್ನು ಮರೆಮಾಚಲು ನಕ್ಸಲರತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ನೂರ್ ಶ್ರೀಧರ್ ಆರೋಪಿಸಿದರು.

ಗೌರಿ ಹತ್ಯೆ ಮಾಡಿದ್ದು ಸಂಘ ಪರಿವಾರದ ವ್ಯಕ್ತಿಗಳು ಎಂಬ ಬಲವಾದ ಅನುಮಾನ ನಮಗೆ ಇದೆ. ಹಾಗಾಗಿ ಪೊಲೀಸರು ತನಿಖೆಯ ಕೇಂದ್ರಬಿಂದು ವಾಗಿ ಸಂಘ ಪರಿವಾರವನ್ನು ಪರಿಗಣಿಸಬೇಕು. ತನಿಖೆ ಮುಗಿಯುವವರೆಗೂ ಗೌರಿಹತ್ಯೆಯನ್ನು ನಕ್ಸಲರು ಮಾಡಿದ್ದಾರೆ ಎನ್ನುವ ತೀರ್ಪು ನೀಡುವುದು ಬೇಡ ಎಂದು ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್ ಪೊಲೀಸರಲ್ಲಿ ಮನವಿ ಮಾಡಿದರು.

ನಾವೆಲ್ಲರೂ ಗೌರಿ ಅವರ ಕಾರಣಕ್ಕಾಗಿ ಹೊರ ಬಂದಿಲ್ಲ. 2006 ರಲ್ಲಿ ನಕ್ಸಲಿಸಮ್ ಬಿಟ್ಟು ಹೊರ ಬಂದಿದ್ವಿ. ಆದರೆ ಭೂಗತ ರಾಗಿ ಕೆಲಸ ಮಾಡುತಿದ್ದೆವು. ಭೂಗತದಿಂದ ಹೊರ ಬರಲು ಗೌರಿಲಂಕೇಶ್, ದೊರೆಸ್ವಾಮಿ ಮತ್ತು ಎಕೆ ಸುಬ್ಬಯ್ಯ ಕಾರಣಕರ್ತರು. ನಮ್ಮ ಮೇಲೂ ಕೂಡ ತನಿಖೆ ಮಾಡಲಿ. ನಾಳೆ ಒಂದು ವೇಳೆ ನಮ್ಮ ಮೇಲೆ ದಾಳಿ ಮಾಡಿ ನಾವೇನಾದರೂ ಮೃತಪಟ್ಟರೆ ಅದಕ್ಕೆ ಕಾರಣ ಬಲಪಂಥೀಯರು ಕಾರಣರಾಗುತ್ತಾರೆಯೇ ಹೊರತು ನಕ್ಸಲರು ಕಾರಣರಾಗುವುದಿಲ್ಲ ಎಂದು ನೂರ್ ಶ್ರೀಧರ್ ಹೇಳಿದರು.

ಇದನ್ನೂ ಓದಿ: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡನಿಂದ ಗೌರಿ ಲಂಕೇಶ್ ಹತ್ಯೆ?

ಇದನ್ನೂ ಓದಿ:ಮಾಜಿ ನಕ್ಸಲ್, ನಕ್ಸಲ್ ಪರ ವಾದಿಗಳ ಮೇಲೆ ಕಣ್ಣಿಟ್ಟ ಎಸ್‍ಐಟಿ

https://youtu.be/qJlk323WcjE


Share This Article
Leave a Comment

Leave a Reply

Your email address will not be published. Required fields are marked *