ಬ್ಲ್ಯಾಕ್‍ಮೇಲ್ ಮಾಡೋರಿಗೆ ಭವಿಷ್ಯವಿಲ್ಲ: ಬಸನಗೌಡ ಪಾಟೀಲ್ ಯತ್ನಾಳ

Public TV
1 Min Read

– ಮಂತ್ರಿ ಸ್ಥಾನ, ಹಣ ಕೇಳ್ತಿದ್ದಾರೆ ಮೈತ್ರಿ ಸರ್ಕಾರದ ನಾಯಕರು

ವಿಜಯಪುರ: ಯಾವುದೇ ಪಕ್ಷದಲ್ಲೇ ಇರಲಿ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಮುಂದಾದ ವ್ಯಕ್ತಿ ಭವಿಷ್ಯ ಕಳೆದುಕೊಳ್ಳುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.

ಆಡಿಯೋ ನನ್ನದೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಒಪ್ಪಿಕೊಂಡ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ಸಿಎಂ ಕುಮಾರಸ್ವಾಮಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಈ ಹಿಂದೆ 25 ಕೋಟಿ ರೂ. ನೀಡುವಂತೆ ಸಿಎಂ ಕುಮಾರಸ್ವಾಮಿ ಅವರು ಒಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದರು ಎಂದು ವಿಜುಗೌಡ ಪಾಟೀಲ್ ಅವರ ಹೆಸರನ್ನು ಪ್ರಸ್ತಾಪಿಸದೇ ಆರೋಪ ಮಾಡಿದರು.

ಶಾಸಕ ನಾಗನಗೌಡ ಪುತ್ರ ಶರಣಗೌಡ ಬೆಳೆಯುತ್ತಿರುವ ವ್ಯಕ್ತಿ. ಹೀಗಾಗಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಕುಶಲೋಪರಿ ವಿಚಾರಿಸಿದ್ದಾರೆ ಅಷ್ಟೇ. ಅದನ್ನು ಇಟ್ಟುಕೊಂಡು ಸಿಎಂ ಕುಮಾರಸ್ವಾಮಿ ಬ್ಲ್ಯಾಕ್ ಮೇಲ್ ಮಾಡಿದ್ದು ಸರಿಯಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದರು.

ರಾಷ್ಟ್ರ ಹಾಗೂ ರಾಜ್ಯ ನಾಯಕರ ಒಬ್ಬರನ್ನು ಕರೆದು ಮಾತನಾಡುವುದು ತಪ್ಪಲ್ಲ. ಅನೇಕ ಬಾರಿ ಕೆಲವರು ಬಿಜೆಪಿಗೆ ಬರುತ್ತೇವೆ ಎಂದು ಕೇಳಿಕೊಂಡು ಬರುತ್ತಾರೆ. ನಮಗೆ ಇಷ್ಟು ಹಣ ಕೊಟ್ಟರೆ ಬರುತ್ತೇವೆ, ಮಂತ್ರಿ ಸ್ಥಾನ ಕೊಡುವುದಾದರೆ ಬರುತ್ತೇವೆಂದು ಮೈತ್ರಿ ಶಾಸಕರು ಬಂದಿದ್ದಾರೆ. ಇದನ್ನು ಕೆಲವು ಪುಡಾರಿಗಳು ರೆಕಾರ್ಡ್ ಮಾಡುತ್ತಾರೆ. ಅಂತವರು ರಾಜಕಾರಣದಲ್ಲಿ ಅನರ್ಹರು ಎಂದು ಪರೋಕ್ಷವಾಗಿ ಶರಣಗೌಡ ಅವರಿಗೆ ಟಾಂಗ್ ಕೊಟ್ಟರು.

ಬಿ.ಎಸ್.ಯಡಿಯೂರಪ್ಪ ಅವರು ಶರಣಗೌಡ ಜೊತೆಗೆ ಮಾತನಾಡಿರಬಹುದು. ಆದರೆ ಮಂತ್ರಿ ಸ್ಥಾನ ಕೊಡುತ್ತೇನೆ, ನ್ಯಾಯಾಧೀಶರು ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬುಕ್ ಮಾಡಿಕೊಂಡಿದ್ದೇವೆಂದು ಬಿ.ಎಸ್.ಯಡಿಯೂರಪ್ಪ ಅವರು ಹೇಳಿಲ್ಲ. ಸ್ವತಃ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರೇ ಅದು ಬಿ.ಎಸ್.ಯಡಿಯೂಪ್ಪ ಧ್ವನಿಯಲ್ಲ ಎಂದು ಹೇಳಿದ್ದಾರೆ. ಪಕ್ಷಕ್ಕೆ ಬಾ ಅಂತ ಹೇಳಿರಬಹುದು ಎಂದು ಶಾಸಕರು ದ್ವಂದ್ವ ಹೇಳಿಕೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *