ಕೋರ್ಟ್ ಹೊರ ಆವರಣದಲ್ಲಿ ವಿದ್ಯುತ್ ತಗುಲಿ ಬಾಲಕ ಸಾವು

Public TV
1 Min Read

– ಅಪ್ಪನ ಮುಂದೆ ಒದ್ದಾಡಿ ಪ್ರಾಣಬಿಟ್ಟ ಮಗ

ವಿಜಯಪುರ: ಕೋರ್ಟ್ ಹೊರ ಆವರಣದಲ್ಲಿ ವಿದ್ಯುತ್ ತಗುಲಿ ಮುಗ್ಧ ಬಾಲಕನೊಬ್ಬ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ವಿಜಯಪುರ ತಾಲೂಕಿನ ಕಾತ್ರಾಳ ಗ್ರಾಮದ ಮಾಸಿದ್ದ ಮಲಕಾರಿ ಒಡೆಯರ(4) ಮೃತ ಬಾಲಕ. ತಂದೆ ಮಲಕಾರಿ ಒಡೆಯರ ಕೌಟುಂಬಿಕ ಕಲಹದ ವಿಚಾರವಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ ಬಾಲಕ ಮಾಸಿದ್ದನನ್ನು ಜೊತೆಗೆ ಕರೆದುಕೊಂಡು ಬಂದಿದ್ದರು. ಮಲಕಾರಿ ಅವರು ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಬಾಟಲ್‍ಗೆ ನೀರು ತುಂಬಿಕೊಂಡು ಬರಲು ಹೋಗಿದ್ದರು. ಬಾಲಕ ಕೋರ್ಟ್ ಮುಂಭಾಗದ ಪಾದಚಾರಿ ರಸ್ತೆ ಮೇಲಿದ್ದ ಬೀದಿ ದೀಪದ ಕಂಬದ ಬಳಿ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ಬಾಕ್ಸ್ ಮುಟ್ಟಿದ್ದಾನೆ. ಪರಿಣಾಮ ವಿದ್ಯುತ್ ತಗುಲಿ ಬಾಲಕ ಒದ್ದಾಡಿದ್ದಾನೆ.

ನೀರು ತುಂಬಿಕೊಂಡು ಬಂದ ಮಲಕಾರಿ ಅವರು ಮಗ ಬಿದ್ದು ಒದ್ದಾಡುತ್ತಿರುವುದನ್ನು ನೋಡಿ ರಕ್ಷಣೆಗೆ ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ. ವಿದ್ಯುತ್ ತಗುಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆ ತಲುಪುವುದಕ್ಕೂ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಕಾರಿ ಒಡೆಯರ ಅವರಿಗೆ ಮಾಸಿದ್ದ ಏಕೈಕ ಪುತ್ರ. ಅವನು ಆರು ಜನ ಹೆಣ್ಣು ಮಕ್ಕಳ ಬಳಿಕ ಜನಿಸಿದ್ದ. ಹೀಗಾಗಿ ಆತನ ಮೇಲೆ ಎಲ್ಲರಿಗೂ ಪ್ರೀತಿ ಇತ್ತು. ಬಾಲಕ ಸಾವಿನಿಂದ ಮಲಕಾರಿ ದಂಪತಿ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *