ಅನರ್ಹ ಶಾಸಕರ ತೀರ್ಪು ಕೊಟ್ರೆ ನನ್ನ ಜೈಲಿಗೆ ಹಾಕ್ತಾರೆ: ಯತ್ನಾಳ್

Public TV
1 Min Read

ವಿಜಯಪುರ: ಅನರ್ಹ ಶಾಸಕರ ಪ್ರಕರಣವು ಸುಪ್ರೀಂಕೋರ್ಟ್ ನಲ್ಲಿದೆ. ಈ ಪ್ರಕರಣದ ಬಗ್ಗೆ ತೀರ್ಪು ನೀಡಲು ನಾನು ನ್ಯಾಯಾಧೀಶನಲ್ಲ. ಒಂದು ವೇಳೆ ತೀರ್ಪು ಕೊಟ್ಟರೆ ನನ್ನ ಜೈಲಿಗೆ ಹಾಕುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕರು, ಉಪ ಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಅವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಈ ಮೂಲಕ ಅನರ್ಹ ಶಾಸಕರಿಗೆ ಪುನರ್ಜನ್ಮ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಉಪ ಚುನಾವಣೆಯ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಾನೇನು ಭವಿಷ್ಯ, ಜ್ಯೋತಿಷ್ಯ ಹೇಳುವವನಲ್ಲ. ನಾನ್ಯಾಕ್ ಹೇಳಲಿ? ನಾವು 17 ಕ್ಷೇತ್ರಗಳಲ್ಲಿಯೂ ಜಯ ಸಾಧಿಸುತ್ತೇವೆ ಅಂತ ಹೇಳುತ್ತೇವೆ. ಆದರೆ ಜನ ತೀರ್ಪು ಏನು ಇರುತ್ತದೆ ಎನ್ನುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ನನಗೆ ಬದ್ಧವೈರಿ, ಬಿಜೆಪಿಯಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಆತ್ಮಾವಲೋಕನ ಮಾಡಿಕೊಂಡಿದ್ದು ಖುಷಿ ತಂದಿದೆ. ಕುಮಾರಸ್ವಾಮಿ ಅವರಿಗೆ ಈಗ ಜ್ಞಾನೋದಯವಾಗಿದೆ ಎಂದು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *