ಬಿಜೆಪಿ ಸದಸ್ಯರಿಬ್ಬರ ಮಾರಾಮಾರಿ

Public TV
1 Min Read

ವಿಜಯಪುರ: ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರೊಬ್ಬರು ತಮ್ಮದೇ ಪಕ್ಷದ ಇನ್ನೋರ್ವ ಪಾಲಿಕೆ ಸದಸ್ಯರ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಬಿಜೆಪಿಯ ಆನಂದ್ ದುಮ್ಮಾಳೆ ಹಲ್ಲೆ ಮಾಡಿದ ಪಾಲಿಕೆಯ ಸದಸ್ಯ. ರಾಜು ಮಗಿಮಠ ಹಲ್ಲೆಗೆ ಒಳಗಾದವರು. ಇಬ್ಬರು ಬಿಜೆಪಿಯವರೇ ಆಗಿದ್ದರೂ, ಸಾಮಾನ್ಯ ಸಭೆಯಲ್ಲಿ ವೈರಿಗಳಂತೆ ಜಗಳಕ್ಕೆ ಇಳಿದು, ಹಲ್ಲೆ ನಡೆಸಿದ್ದಾರೆ. ಸಭೆಗೆ ಆನಂದ್ ದುಮ್ಮಾಳೆ ಮದ್ಯ ಸೇವಿಸಿ ಬಂದಿದ್ದೇ ಈ ಘಟನೆ ಕಾರಣ ಅಂತಾ ಹಲ್ಲೆಗೆ ಒಳಗಾದ ರಾಜು ಮಗಿಮಠ ಆರೋಪಿಸಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಇಂದು ಸಾಮಾನ್ಯಸಭೆ ಆರಂಭವಾಗಿತ್ತು. ಈ ವೇಳೆ ಬಿಜೆಪಿ ಸದಸ್ಯ ರಾಜು ಮಗಿಮಠ ಅವರು ಮೇಯರ್ ಅವರಿಗೆ ಪಾಲಿಕೆ ಆಸ್ತಿಗಳ ಲೀಸ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇತ್ತ ಆನಂದ್ ದುಮ್ಮಾಳೆ ಸ್ವಪಕ್ಷದ ರಾಜು ಅವರಿಗೆ ಬೆಂಬಲ ನೀಡುವ ಬದಲಿಗೆ, ವಿರೋಧ ವ್ಯಕ್ತಪಡಿಸಿದ್ದಾರೆ.

ನೀವು ವಿಷಯಾಂತರ ಮಾಡುತ್ತೀರುವಿರಿ ಅಂತಾ ರಾಜು ಅವರು ಪದೇ ಪದೇ ಹೇಳಿದ್ದಾರೆ. ಆದರೆ ಅವರ ಮಾತನ್ನು ಲೆಕ್ಕಿಸದ ಆನಂದ್ ದುಮ್ಮಾಳೆ ಮಾತಿಗೆ ಮಾತು ಸೇರಿಸಿ, ಹಲ್ಲೆಗೆ ಮುಂದಾದರು. ತಕ್ಷಣವೇ ಕೆಲವು ಸದಸ್ಯರು ಮಧ್ಯಪ್ರವೇಶಿಸಿ, ನೀವು ಹೀಗೆ ಮಾಡುವುದು ಸರಿಯಲ್ಲ ಅಂತ ಹೇಳುತ್ತಿದ್ದರೂ, ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳದ ಆನಂದ್, ರಾಜು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಗಲಾಟೆಯಾಗಿದ್ದರಿಂದ ಮೇಯರ್ ಸಭೆಯನ್ನು ಮೊಟಕುಗೊಳಿಸಿ, ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇತ್ತ ಹಲ್ಲೆಗೆ ಒಳಗಾದ ರಾಜು ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆನಂದ್ ಸಭೆಗೆ ಮದ್ಯ ಸೇವಿಸಿ ಬಂದಿದ್ದರು. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಅಂತಾ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=fQTjIFd3Jac

Share This Article
Leave a Comment

Leave a Reply

Your email address will not be published. Required fields are marked *