ವಕ್ಫ್ ಆಸ್ತಿ ವರದಿ, 40% ಸರ್ಕಾರ ಹಗರಣ ಗಲಾಟೆ ನಡುವೆ ಮಳೆಗಾಲದ ಅಧಿವೇಶನ ಬಲಿ

Public TV
3 Min Read

ಬೆಂಗಳೂರು: ವಿಧಾನ ಪರಿಷತ್ (Vidhana Parishad) ಕಲಾಪದ (Session) ಕೊನೆ ದಿನವೂ ಗದ್ದಲ ಗಲಾಟೆಗೆ ಕಾರಣವಾಯ್ತು. 40% ಸರ್ಕಾರ, ವಕ್ಫ್ ಆಸ್ತಿ (Wakf Property) , BMS ಟ್ರಸ್ಟ್‌ ಹಗರಣದ ಗಲಾಟೆ ಸದನದಲ್ಲಿ ಸದ್ದು ಮಾಡಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಸಭಾಪತಿಗಳು ಮುಂದೂಡಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ನಿನ್ನೆ ಗದ್ದಲದ ನಡುವೆ ಮಾಣಿಪ್ಪಾಡಿ ವರದಿ ಮಂಡಿಸಿದ್ದಾರೆ. ನಮಗೆ ಅದರ ಪ್ರತಿ ಕೊಡಿ ಎಂದು ಮಾಣಿಪ್ಪಾಡಿ ವರದಿ ಕುರಿತು ನಿಯಮ 59ರ ಅಡಿ ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿದರು. ಚರ್ಚೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ, ಕಾಂಗ್ರೆಸ್ ನಿಲುವಳಿ ಸೂಚನೆ ಪರಿಶೀಲಿಸಿದ್ದೇನೆ. ಮಾಣಪ್ಪಾಡಿ ವರದಿ ಸ್ಥಾಯಿ ಸಮಿತಿ ನೀಡಿದ ವರದಿಯಲ್ಲ. ಅಲ್ಪಸಂಖ್ಯಾತ ಆಯೋಗದ‌ ಕಾಯ್ದೆಯಂತೆ ಮಂಡಿಸಿದ್ದಾರೆ. ಇದು ಇತ್ತೀಚೆಗೆ ನಡೆದ ಘಟನೆಯಲ್ಲ. ಹಾಗಾಗಿ ನಿಯಮ‌ 59ರ ನಿಲುವಳಿ ಸೂಚನೆ ತಿರಸ್ಕಾರ ಮಾಡುತ್ತೇನೆ ಎಂದು ರೂಲಿಂಗ್ ನೀಡಿದರು. ವರದಿಯನ್ನು ಸದಸ್ಯರಿಗೆ ನೀಡುವಂತೆ ಸೂಚಿಸಿದರು. ಸಭಾಪತಿಗಳ ನಿರ್ಧಾರಕ್ಕೆ ಕಾಂಗ್ರೆಸ್ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.

ಈ ವೇಳೆ ಬಿಎಂಎಸ್ ಟ್ರಸ್ಟ್ ಅನ್ನು ಖಾಸಗಿಗೆ ಕೊಡಲಾಗಿದೆ ಎನ್ನುವ ವಿಷಯದ ಮೇಲೆ ಚರ್ಚೆಗೆ ಜೆಡಿಎಸ್ (JDS) ಆಗ್ರಹಿಸಿತು. ನಿಯಮ 72ರ ಅಡಿ ಚರ್ಚೆಗೆ ಅವಕಾಶ ಕೋರಿ ಜೆಡಿಎಸ್ ನಾಯಕ ಭೋಜೇಗೌಡ ಮನವಿ ಮಾಡಿದರು. ಆದರೆ ಇದಕ್ಕೆ ಅವಕಾಶ ನೀಡದ ಕಾರಣ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಗದ್ದಲದ ನಡುವೆ ಶಾಸನ ರಚನೆ ಕಲಾಪ ಆರಂಭಿಸಲಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಬೇಡಿಕೆಗಳ ಚರ್ಚೆಗೆ ಅವಕಾಶ ನೀಡದೆ ಶಾಸನ ರಚನೆ ಕಲಾಪ ಕೈಗೆತ್ತಿಕೊಂಡಿದ್ದನ್ನು ವಿರೋಧಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಭಿತ್ತಿಪತ್ರ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಾಂಗ್ರೆಸ್ (Congress) ಜೆಡಿಎಸ್ ಸದಸ್ಯರ ಧರಣಿ ನಡುವೆ ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ, ಕರ್ನಾಟಕ ಸ್ಟಾಂಪು ಮೂರನೇ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಗಳನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ಅಂಗೀಕರಿಸಲಾಯಿತು.

ವಿಧೇಯಕಗಳು ಅಂಗೀಕಾರದ ವೇಳೆ ಸಭಾಪತಿ ಪೀಠದ ಮುಂದೆ ಕಾಂಗ್ರೆಸ್ ಸದಸ್ಯರು ಜಮಾವಣೆಗೊಂಡು ಹಗರಣಗಳ ಆರೋಪದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ (BJP) ಸದಸ್ಯರೂ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಈ ವೇಳೆ ಪ್ರತಿಭಟನಾನಿರತ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಘೋಷಣೆ ಪೈಪೋಟಿ ನಡೆಯಿತು. ಸದನದಲ್ಲಿ ಗದ್ದಲ ಹೆಚ್ಚಾದ ನಡುವೆಯೇ ಸಭಾಪತಿಗಳು 10 ದಿನಗಳ ಕಲಾಪದ ಸಾರಾಂಶವನ್ನು ಸದನದಲ್ಲಿ ಮಂಡಿಸಿದರು. ನಂತರ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಇದನ್ನೂ ಓದಿ: ಬಿಜೆಪಿಯವರು ನೆಪ ಹೇಳೋ ಬದಲು PFIಯನ್ನು ನಿಷೇಧಿಸಲಿ: ದಿನೇಶ್ ಗುಂಡೂರಾವ್

ನಂತರ ಕಲಾಪವನ್ನು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅನಿರ್ಧಿಷ್ಟಾವದಿಗೆ ಮುಂದೂಡಿಕೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯಗೊಂಡಿತು. ಕಲಾಪ ಮುಗಿದ ನಂತರವೂ ಸದನದಲ್ಲಿ ಭಾರತ್ ಮಾತಾಕಿ ಜೈ, ಒಂದೇ ಮಾತರಂ ಘೊಷಣೆಗಳು ಮೊಳಗಿದವು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪೈಪೋಟಿಯಲ್ಲಿ ಘೋಷಣೆ ಮೊಳಗಿಸಿದರು. ಇದನ್ನೂ ಓದಿ: BJPಗೆ ದೇಶದ ಅಭಿವೃದ್ಧಿಗಿಂತ ಬೇರೆ ಪಕ್ಷ ಮುಗಿಸೋದೇ ಮುಖ್ಯ – ರಾಹುಲ್ ಪರ ಖರ್ಗೆ ಬ್ಯಾಟಿಂಗ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *