ಕುದುರೆಗೆ ಚಿತ್ರಹಿಂಸೆ ಕೊಟ್ಟು ಕೊಂದ್ರು, ಪೊಲೀಸರೂ ಸಹಾಯ ಮಾಡಿದ್ರು!- ಅಮಾನವೀಯ ಕೃತ್ಯದ ವಿಡಿಯೋ ವೈರಲ್

Public TV
1 Min Read

 

ಚಂಡೀಗಢ: ಕುದುರೆಯೊಂದಕ್ಕೆ ಚಿತ್ರಹಿಂಸೆ ಕೊಟ್ಟು ಹಗ್ಗದಿಂದ ಬಿಗಿದು ಕೊಂದಿರುವ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾನುಕುಲವೇ ತಲೆತಗ್ಗಿಸುವ ಇಂತಹದ್ದೊಂದು ಘಟನೆ ಮಂಗಳವಾರದಂದು ಹರಿಯಾಣದ ಜಿಂದ್ ಪ್ರದೇಶದ ಗೊಹಾನಾ ರಸ್ತೆಯಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯದ ಹಿನ್ನೆಲೆಯಲ್ಲಿ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ವ್ಯಕ್ತಿಗಳು ಕುದುರೆಯನ್ನ ದೊಣ್ಣೆಯಿಂದ ಹೊಡೆದು ಹಗ್ಗದಿಂದ ಬಿಗಿಯಾಗಿ ಎಳೆದಿದ್ದಾರೆ. ಕುದುರೆಯ ಕಾಲುಗಳು ಹಾಗು ಬಾಯಿಗೆ ಹಗ್ಗ ಕಟ್ಟಿ ಎಲ್ಲಾ ದಿಕ್ಕಿನಿಂದ ಎಳೆಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಇವರ ಹಿಂಸೆಯಿಂದ 10 ನಿಮಿಷಕ್ಕೂ ಹೆಚ್ಚು ಕಾಲ ಒದ್ದಾಡಿದ ಕುದುರೆ ಕೊನೆಗೆ ಸಾವನ್ನಪ್ಪಿದೆ.

ಈ ಕುದುರೆ ಬೀದಿಗಳಲ್ಲಿ ಅಲೆದಾಡಿಕೊಂಡಿದ್ದು, ಹತ್ತಿರದ ಮಾರುಕಟ್ಟೆ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿ, ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿತ್ತು ಎಂದು ಇಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಪೊಲೀಸರು ಪಶುಸಂಗೋಪನಾ ಇಲಾಖೆಯ ಪ್ರಾಣಿ ತಜ್ಞರಿಗೆ ವಿಷಯ ತಿಳಿಸಿರಲಿಲ್ಲ ಎಂದು ವರದಿಯಾಗಿದೆ. ಪೊಲೀಸರ ಸಹಾಯ ಪಡೆದು ಸ್ಥಳೀಯರೇ ಕುದುರೆಯನ್ನ ಕೊಂದಿದ್ದಾರೆ.

ಈ ಕೃತ್ಯಕ್ಕೆ ಎಎಸ್‍ಐ ರಾಜಿಂದರ್ ಕುಮಾರ್ ಮತ್ತು ವಿಶೇಷ ರಕ್ಷಣಾ ಅಧಿಕಾರಿ ಸುಭಾಷ್ ಸಹಾಯ ಮಾಡಿದ್ದಾರೆ. ಸದ್ಯ ಇಬ್ಬರನ್ನೂ ವರ್ಗಾವಣೆ ಮಾಡಿದ್ದು, ಇವರ ವಿರುದ್ಧ ತನಿಖೆ ಆರಂಭವಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರೋ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿಯಾದ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್, ಕುದುರೆ ತುಂಬಾ ಒದ್ದಾಡುತ್ತಿದ್ದರಿಂದ ಅದನ್ನು ನಿಯಂತ್ರಿಸಲು ಮಾತ್ರ ಪೊಲೀಸರು ಸಹಾಯ ಮಾಡಿದ್ದಾರೆ ಅಂತ ಹೇಳಿದ್ದಾರೆ. ಕುದುರೆಯನ್ನ ನಿಯಂತ್ರಿಸಲು ಹಗ್ಗದಿಂದ ಕಟ್ಟಿ ಈ ರೀತಿ ಹಿಂಸೆ ನೀಡೋ ಬದಲು ಬೇರೆ ಯಾವುದೇ ಮಾರ್ಗ ಇರಲಿಲ್ವಾ ಎಂದು ಕೇಳಿದ್ದಕ್ಕೆ, ನೀವು ಬಂದು ನಿಯಂತ್ರಿಸಬೇಕಿತ್ತು ಎಂದು ದಿನೇಶ್ ಉಡಾಫೆಯ ಉತ್ತರ ನೀಡಿದ್ದಾರೆ.

ಕುದುರೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ. ವರದಿಯಲ್ಲಿ ಕುದುರೆ ಹಿಂಸೆಯಿಂದ ಸಾವನ್ನಪ್ಪಿದೆ ಎಂಬ ಕಾರಣವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *