ಬಳ್ಳಾರಿ: ಬೈಕ್ ಸವಾರನಿಗೆ ಹಿಂದಿಯಿಂದ ವಾಹನವೊಂದು ಡಿಕ್ಕಿಯಾದ ಪರಿಣಾಮ ಯುವಕ ತೀವ್ರವಾಗಿ ಗಾಯಗೊಂಡಿದ್ದು, ಒಂದು ಗಂಟೆ ಕಾಲ ನಡು ರಸ್ತೆಯಲ್ಲೇ ಸಹಾಯಕ್ಕಾಗಿ ನರಳಾಡಿದ ದಾರುಣ ಘಟನೆ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಿಮ್ಮಾಪುರ ಬಳಿಯ ತೋರಣಗಲ್ ಮೈಲಾರ ರಸ್ತೆಯಲ್ಲಿ ನಡೆದಿದೆ.
ಮೂಲತಃ ಹಡಗಲಿ ತಾಲೂಕು ಹಗರನೂರು ಗ್ರಾಮದ ನಿವಾಸಿ ಟಿ.ಎಂ.ನಾಗರಾಜ್(28) ಅಪಘಾತದಲ್ಲಿ ಗಾಯಗೊಂಡ ಯುವಕ. ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ನಾಗರಾಜ್ ಸ್ಥಳೀಯರನ್ನು ಸಹಾಯಕ್ಕಾಗಿ ಬೇಡಿಕೊಂಡಿದ್ದಾರೆ. ಯಾರು ನಾಗರಾಜ್ ಸಹಾಯಕ್ಕೆ ತೆರಳದೆ ತಮ್ಮ ಮೊಬೈಲ್ನಲ್ಲಿ ಘಟನೆಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಬೈಕ್ಗೆ ಡಿಕ್ಕಿ ಹೊಡೆದ ವಾಹನ ಚಾಲಕ ಸಹ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಒಂದು ಗಂಟೆ ಕಾಲ ನಡುರಸ್ತೆಯಲ್ಲಿ ನಾಗರಾಜ್ ಸಹಾಯಕ್ಕಾಗಿ ನರಳಾಡಿದ ನಂತರ ಸ್ವತಃ ನಾಗರಾಜ್ ಮೊಬೈಲ್ ಮೂಲಕ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೋಷಕರು ಸ್ಥಳಕ್ಕೆ ಆಗಮಿಸಿ ಅಂಬುಲೈನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.