ಹಾವೇರಿ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಏಪ್ರಿಲ್ 14ರವರೆಗೆ ಭಾರತ ಲಾಕ್ಡೌನ್ಗೆ ಕರೆ ನೀಡಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕಲಂ 144 ಅನ್ವಯ ಜಿಲ್ಲಾದ್ಯಂತ ಸಂತೆ, ಜಾತ್ರೆ ಸೇರಿದಂತೆ ಜನದಟ್ಟನೆ ಸೇರುವ ಕಾರ್ಯಕ್ರಮ ಮಾಡದಂತೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಜಿಲ್ಲೆಯ ಹಾನಗಲ್ ಪಟ್ಟಣದ ಸೋಮವಾರಪೇಟೆ ಬಡಾವಣೆಯಲ್ಲಿ ಶುಕ್ರವಾರದ ಸಂತೆ ಮಾಡಲಾಗುತ್ತಿತ್ತು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ತರಕಾರಿ ಮಾರಾಟ ಮತ್ತು ಖರೀದಿ ನಡೆದಿದೆ. ಇದನ್ನು ಕಂಡು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಾರುಕಟ್ಟೆಯಲ್ಲಿ ಇದ್ದವರಿಗೆ ಲಾಠಿ ರುಚಿ ತೋರಿಸಿದರು.
ಪೊಲೀಸರು ಲಾಠಿ ಏಟು ನೀಡುತ್ತಿದ್ದಂತೆ ಜನರು ಎದ್ದೋ ಬಿದ್ದೋ ಅಲ್ಲಿಯೇ ಇದ್ದ ಸಿಕ್ಕಸಿಕ್ಕ ಮನೆಗಳಲ್ಲಿ ಹೊಕ್ಕು ಕುಳಿತರು. ನಂತರ ಪೊಲೀಸರು ಮರೆಯಾಗುತ್ತಿದ್ದಂತೆ ಮನೆಯಿಂದ ಹೊರಬಂದು ತಮ್ಮ ತಮ್ಮ ಮನೆಗಳತ್ತ ಓಡಿದರು. ನಂತರ ನಿಯಮ ಉಲ್ಲಂಘಿಸಿ ತರಕಾರಿ ಮಾರಾಟ ಮಾಡುತ್ತಿದ್ದವರಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಂಡು ಮನೆಗೆ ಕಳುಹಿಸಿದರು.