ನಾನು ಕೂಡ ಕಾಳಾ ಸಿನಿಮಾ ನೋಡ್ತೇನೆ, ನಮಗೂ ಟಿಕೆಟ್ ಕೊಡಿ : ವಾಟಾಳ್ ನಾಗರಾಜ್

Public TV
1 Min Read

ಬೆಂಗಳೂರು: ಸೋಮವಾರ ನಟ ರಜಿನಿಕಾಂತ್ ಅಭಿನಯದ ಕಾಳಾ ಸಿನಿಮಾವನ್ನು ನೋಡುವುದಾಗಿ ಕನ್ನಡ ಪರ ಸಂಘನಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ರಜಿನಿಕಾಂತ್ ಕಾಳಾ ಚಿತ್ರದ ವಿರುದ್ಧ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸಿನಿಮಾದಲ್ಲಿ ಏನಿದೆ ಎಂಬುವುದನ್ನು ನೋಡಬೇಕು. ನಮಗೂ ಟಿಕೆಟ್ ಕೊಡಬೇಕು. ನಾಳೆ ನಮ್ಮ ಕಾರ್ಯಕರ್ತರು ಸಿನಿಮಾ ವೀಕ್ಷಣೆ ಮಾಡಲು ಬರುತ್ತವೆ. ನಮಗೂ ಟಿಕೆಟ್ ನೀಡಿ ಚಿತ್ರಮಂದಿರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಸಿನಿಮಾ ಪ್ರದರ್ಶನ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಭೂಮಿಕಾ ಚಿತ್ರ ಮಂದಿರದ ಎದುರು ಪ್ರತಿಭಟನೆ ನಡೆಸಲಾಯಿತು. ನೂರಾರು ಕನ್ನಡ ಪರ ಹೋರಾಟಗಾರರು ಕಪ್ಪು ಪಟ್ಟಿ ಹಿಡಿದು ರಜಿನಿಕಾಂತ್ ವಿರುದ್ಧ ದಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದರು.

ಹೊಸ ಪಕ್ಷ ಕಟ್ಟುವ ಮೂಲಕ ರಾಜಕೀಯ ಜೀವನ ಆರಂಭಿಸಿರುವ ರಜಿನಿಕಾಂತ್‍ಗೆ ಕರ್ನಾಟಕಕ್ಕೆ ಪ್ರವೇಶವಿಲ್ಲ, ಅವರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಸಿನಿಮಾ ಪ್ರದರ್ಶನಕ್ಕೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಇದು ಕರ್ನಾಟಕಕ್ಕೆ ಘೋರ ಅನ್ಯಾಯ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಹ ಇದಕ್ಕೆ ಅವಕಾಶ ನೀಡಿದ್ದಾರೆ. ಇದೇ ರೀತಿ ರಕ್ಷಣೆ ಮುಂದುವರೆದರೆ ಬೆಂಗಳೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ಕುರಿತು ಗೃಹ ಸಚಿವರವನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೆವೆ. ಸಿನಿಮಾ ಮಂದಿರಗಳಿಗೆ ಪ್ರತಿನಿತ್ಯ ರಕ್ಷಣೆ ನೀಡುವುದರಿಂದ ಪೊಲೀಸರಿಗೆ ಎಷ್ಟು ಖರ್ಚು ಮಾಡಲಾಗಿದೆ. ಈ ನಡೆ ಕರ್ನಾಟಕದಲ್ಲೇ ತಮಿಳು ಸಿನಿಮಾಗಳಿಗೆ ಬೆಂಬಲ ನೀಡಿದಂತಾಗುತ್ತದೆ. ಈ ರೀತಿ ಇತಿಹಾಸದಲ್ಲಿ ನಡೆದಿಲ್ಲ. ಇದುವರೆಗೂ ಕೋಟಿ ಕೋಟಿ ಹಣ ಖರ್ಚಾಗುತ್ತಿದ್ದು, ಸಿನಿಮಾಗೆ ರಕ್ಷಣೆ ನೀಡುತ್ತಿರುವುದರಿಂದ ಆಗಿರುವ ಖರ್ಚನ್ನು ರಜಿನಿಕಾಂತ್ ಅವರಿಂದಲೇ ಪಡೆಯಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *