ಕೊರೊನಾ ವಾರಿಯರ್ಸ್ ಸಹಾಯಕ್ಕೆ ನಿಂತ ವಶಿಷ್ಠ ಸಿಂಹ

Public TV
2 Min Read

ಬೆಂಗಳೂರು: ಲಾಕ್‍ಡೌನ್ ಟೈಮಲ್ಲಿ ಸ್ಯಾಂಡಲ್‍ವುಡ್ ನಟ ವಶಿಷ್ಠ ಸಿಂಹ ಏನು ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ವಶಿಷ್ಠ ಸಿಂಹ ಸದ್ದಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಕೊರೊನಾ ವಾರಿಯರ್ಸ್‍ಗಾಗಿ ಹಗಲಿರುಳು ದುಡಿಯುವ ಮೂಲಕ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

ಸಹಾಯ ಮಾಡಿದ್ದರ ಕುರಿತು ಬಹುತೇಕ ನಟ, ನಟಿಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಶಿಷ್ಠ ಸಿಂಹ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಕೊರೊನಾ ವಾರಿಯರ್ಸ್‍ಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಹೌದು ಲಾಕ್‍ಡೌನ್ ಸಮಯದಲ್ಲಿ ಬಹುತೇಕ ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆದರೆ ವಶಿಷ್ಠ ಸಿಂಹ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿಲ್ಲ. ಈ ಹಿಂದೆ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಸ್ಪಂದಿಸಿ ಚಪ್ಪಾಳೆ ತಟ್ಟಿದ್ದರು. ಅಲ್ಲದೆ ದೀಪ ಬೆಳಗಿದ್ದರು. ಇದನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತಾವು ಸಹಾಯ ಮಾಡುತ್ತಿರುವುದರ ಕುರಿತು ಅಪ್‍ಡೇಟ್ ನೀಡಿಲ್ಲ.

ವಶಿಷ್ಠ ತಮ್ಮದೇಯಾದ ಸ್ನೇಹಿತರ ತಂಡ ಕಟ್ಟಿಕೊಂಡು, ಮಾಸ್ಕ್ ಹಾಗೂ ನೈಸರ್ಗಿಕವಾಗಿ ತಯಾರಿಸಿದ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ವಿತರಿಸುತ್ತಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಹಾಗೂ ವೈದ್ಯರಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ವಶಿಷ್ಠ ಸಿಂಹ ಈ ಕೆಲಸಕ್ಕೆ ಕೈ ಹಾಕಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡುತ್ತಿದ್ದಾರೆ.

ಹಲವು ದಿನಗಳಿಂದ ವಶಿಷ್ಠ ಸಿಂಹ ತಮ್ಮ ತಂಡದೊಂದಿಗೆ ಈ ಕಾರ್ಯದಲ್ಲಿ ತೊಡಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ತಮ್ಮ ಸಹಾಯ ಕಾರ್ಯವನ್ನು ಮಾಡುತ್ತಿದ್ದಾರಂತೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸ್ವಚ್ಛತಾ ಕಾರ್ಯ ಮಾಡುವವರಿಗೆ ಹಾಗೂ ಅಗತ್ಯವಿರುವ ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದೇವೆ. ನೈಸರ್ಗಿಕವಾಗಿ ತಯಾರಿಸಿದ ಸ್ಯಾನಿಟೈಸರ್ ಗಳನ್ನು ವಿತರಿಸುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಇಲ್ಲ ಎಂದು ವಶಿಷ್ಠ ಮಾಹಿತಿ ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ಈ ಕಾರ್ಯದಲ್ಲಿ ತೊಡಗಿದ್ದು, 2 ಸಾವಿರಕ್ಕೂ ಅಧಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಈಗಾಗಲೇ ವಿತರಿಸಿದ್ದೇವೆ. 20ಕ್ಕೂ ಹೆಚ್ಚು ಕೇಂದ್ರಗಳನ್ನು ಈಗಾಗಲೇ ನಾವು ತಲುಪಿದ್ದು, ನಮ್ಮ ಈ ಸಹಾಯ ಮುಂದುವರಿಯಲಿದೆ. ಇಷ್ಟು ಮಾತ್ರವಲ್ಲದೆ ಇನ್ನೊಂದು ವಿಚಾರದ ಕುರಿತು ಸಹ ನಾವು ಪ್ಲಾನ್ ಮಾಡಿದ್ದು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್ ಕಿಟ್‍ಗಳನ್ನು ನೀಡಲು ಮುಂದಾಗಿದ್ದೇವೆ. ಈಗಾಗಲೇ 400 ಪಿಪಿಇ ಕಿಟ್‍ಗಳನ್ನು ಆರ್ಡರ್ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಿತರಿಸುತ್ತೇವೆ ಎಂದು ವಶಿಷ್ಠ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈದ್ಯರು ಹಾಗೂ ಪೊಲೀಸರ ರಕ್ಷಣೆಗೆ ನಿಂತಿದ್ದಾರೆ.

ವಶಿಷ್ಠ ಸಿಂಹ ಅಭಿನಯದ ಮಾಯಾಬಜಾರ್ ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಂಡಿದೆ. ಇಂಡಿಯಾ ಇಂಗ್ಲೆಂಡ್ ಸಿನಿಮಾ ನಂತರ ವಶಿಷ್ಠ ಮಯಾಬಜಾರ್‍ನಲ್ಲಿ ಅಭಿನಯಿಸಿದ್ದರು. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಂಡವಾಳ ಹೂಡಿದ್ದರು. ಇದಾದ ಬಳಿಕ ಲಾಕ್‍ಡೌನ್ ಘೋಷಣೆಯಾಗಿದ್ದು, ಹೀಗಾಗಿ ವಶಿಷ್ಠ ಅವರ ಮುಂದಿನ ಯೋಜನೆ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *