ಮಾಜಿ ಸಚಿವ ವರ್ತೂರು ಪ್ರಕಾಶ್‌ ಕಿಡ್ನಾಪ್‌ ಕೇಸ್‌ನ ಪ್ರಮುಖ ಆರೋಪಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್‌

Public TV
2 Min Read

ಬೆಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಇಂದಿರಾನಗರ ಠಾಣೆ ಪೊಲೀಸರು, ರೌಡಿಶೀಟರ್‌ ಲೋಹಿತ್‌ ರೋಹಿತ್‌ ಎಂಬಾತನ ಮೇಲೆ ಫೈರಿಂಗ್‌ ನಡೆಸಿದ್ದಾರೆ.

ಜೆ.ಬಿ.ನಗರ ಠಾಣೆ ವ್ಯಾಪ್ತಿಯ ಚಲ್ಲಘಟ್ಟ ಲೋಹಿತ್‌ ರೋಹಿತ್ ಮೇಲೆ ಫೈರಿಂಗ್‌ ಮಾಡಿದ್ದಾರೆ. ಪಿಎಸ್‍ಐ ಅಮರೇಶ್ ಜೇಗರಕಲ್ ಅವರು ರೌಡಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಲಾಗಿತ್ತು. ಆದರೂ ರೋಹಿತ್‌ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಕಾಲಿಗೆ ಫೈರಿಂಗ್‌ ಮಾಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಂದ ದಾಳಿ- ಇಬ್ಬರು ಪೊಲೀಸರು ಹುತಾತ್ಮ

ಲೋಹಿತ್‌ ರೋಹಿತ್‌ ವಿರುದ್ಧ ಹಲವಾರು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್, ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಅಪಹರಣ ಪ್ರಕರಣ ಹಾಗೂ ಇತರೆ 17 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಲೋಹಿತ್‌ ತಲೆ ಮರೆಸಿಕೊಂಡು ಓಡಾಡುತ್ತಿದ್ದ.

ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಮಾತನಾಡಿ, ಇಂದಿರನಗರ ಆಟೋ ಚಾಲಕ ವಿಜಯಕುಮಾರ್ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಪತ್ತೆಯಾಗದೇ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಆತನ ಪತ್ತೆಗೆ ಹಲಸೂರು ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಇಂದು ಆರೋಪಿಯು ಜೀವನ್ ಭೀಮಾನಗರ ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಬೆಳಗ್ಗೆ ಪೊಲೀಸರು ಆತನ ಬೆನ್ನತ್ತಿದ್ದಾರೆ. ಈ ವೇಳೆ ಕಾನ್‌ಸ್ಟೇಬಲ್‌ ಮೇಲೆ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬರೆ?

ಆರೋಪಿ ಬಳಿ ಒಂದು ಕಾರು ಪತ್ತೆಯಾಗಿದೆ. ಆಂಧ್ರಪ್ರದೇಶದಲ್ಲಿ ಕಾರು ಕಳ್ಳತನ ಮಾಡಿದ್ದ. ಅದೇ ಕಾರಿನಲ್ಲಿ ಆರೋಪಿ ಓಡಾಡುತ್ತಿದ್ದ. ಇಂದು ಬೆಳಗ್ಗೆ ಆತನ ಚಟುವಟಿಕೆ ಈ ಭಾಗದಲ್ಲಿ ಪತ್ತೆಯಾಗಿದ್ದರಿಂದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ 17 ಕಡೆ ಪ್ರಕರಣಗಳು ದಾಖಲಾಗಿವೆ. ದುಡ್ಡು ಇರುವವರನ್ನು ಅಪಹರಣ ಮಾಡುವುದು ಇವನ ಛಾಳಿ. ಅವರು ಸಿಗದಿದ್ದಾಗ ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆಂಧ್ರಪ್ರದೇಶದಲ್ಲೂ ಇವನ ಮೇಲೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *