ಕಾಂಗ್ರೆಸ್ ಮಾಜಿ ಶಾಸಕರನ್ನ ಹೊಗಳಿದ ಸೋಮಣ್ಣ, ಬಿಜೆಪಿ ಶಾಸಕಿ – ಗೌಡರಿಗೆ `ಕೈ’ ಕೊಡ್ತಾರಾ ಭಿನ್ನ ನಾಯಕ?

Public TV
1 Min Read

ತುಮಕೂರು: ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುವುದು ಖಚಿತವಾಗುತ್ತಿದಂತೆ ಕಾಂಗ್ರೆಸ್ ಮುಖಂಡದಲ್ಲಿ ಬಂಡಾಯಕ್ಕೆ ಕಾರಣವಾಗಿದ್ದು ತಿಳಿದ ವಿಚಾರ. ಆದರೆ ಆ ಬಳಿಕ ನಡೆದ ಬೆಳವಣಿಗೆಗಳಲ್ಲಿ ಪಕ್ಷದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಬಂಡಾಯ ಶಮನಗೊಳಿಸಿದ್ದರು. ಆದರೆ ಚುನಾವಣೆಗೆ ಕೆಲ ದಿನಗಳು ಇರುವ ಸಂದರ್ಭದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಮಾಜಿ ಶಾಸಕ ರಾಜಣ್ಣ ಅವರನ್ನು ಹಾಡಿ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಂದು ಕ್ಷೇತ್ರದ ಮಧುಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಪರ ಪ್ರಚಾರ ನಡೆಸಿ ಮಾತನಾಡಿದ ವಿ.ಸೋಮಣ್ಣ ಹಾಗೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು, ಕೆಎನ್ ರಾಜಣ್ಣ ಅವರನ್ನು ಹಾಡಿ ಹೊಗಳಿದರು. ಅಲ್ಲದೇ ರಾಜಣ್ಣರ ಬೆಂಬಲ ನಮಗಿದೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ರಾಜಣ್ಣ ನಮಗೆ ಬೆಂಬಲ ನೀಡುತ್ತಾರೆ ಎಂದು ಶಾಸಕಿ ಪೂರ್ಣಿಮಾ ಅವರು ಹೇಳಿದರು.

ಮಾಧ್ಯಮಗಳೊಂದಿಗೆ ಮತನಾಡಿದ ಸೋಮಣ್ಣ ಅವರು, ರಾಜಣ್ಣ ಅವರ ಅಭಿವೃದ್ಧಿ ಕೆಲಸ ನಮಗೆ ಅನುಕೂಲವಾಗಲಿದೆ. ಅವರು ಸಾಕಷ್ಟು ಬುದ್ಧಿಜೀವಿಗಳಾಗಿದ್ದು, ಇಲ್ಲಿ ಸೋಮಣ್ಣ, ರಾಜಣ್ಣ ಎಂಬುವುದು ಇಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಆಸ್ಥಿತ್ವ ಕಳೆದುಕೊಂಡಿದೆ. ಈ ಚುನಾವಣೆ ದೇಶದ ಚುನಾವಣೆ ಆಗಿರುವುದಿಂದ ಜನರು ದೇಶಕ್ಕಾಗಿ ಮೋದಿ ಎನ್ನುತ್ತಾರೆ. ರಾಜಣ್ಣರ ಅಭಿವೃದ್ಧಿ ಕೆಲಸಗಳ ನಮಗೂ ಸಹಕಾರಿ ಆಗಲಿದೆ ಎಂದರು.

ಮೈತ್ರಿ ಬಗ್ಗೆ ಬೇಸರ ಇರುವುದಾಗಿ ರಾಜಣ್ಣ ಅವರು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಹಾಗಾಗಿ ಆಂತರಿಕವಾಗಿ ನಮಗೆ ಬೆಂಬಲ ನೀಡುತ್ತಾರೆ. ಅವರ ನಾಮಪತ್ರವನ್ನು ಒತ್ತಾಯದಿಂದ ಹಿಂಪಡೆಯುವಂತೆ ಮಾಡಿದ್ದಾರೆ. ಅವರಿಗೆ ಮೈತ್ರಿಯಲ್ಲಿ ಅಸಮಾಧಾನ ಇದೆ. ಈ ಅಸಮಾಧಾನ ನಮಗೆ ಅನುಕೂಲ ಆಗಲಿದೆ ಎಂದು ಶಾಸಕಿ ಹೇಳಿದರು. ರೋಡ್ ಶೋ ದಲ್ಲಿ ನಿರೀಕ್ಷೆಗೂ ಮೀರಿ ಸೇರಿದ ಜನ ಬಿಜೆಪಿಗೆ ಬೆಂಬಲ ನೀಡಿದರು. ರಸ್ತೆಯುದ್ದಕ್ಕೂ ಕೇಸರಿ ಬಾವುಟ ರಾರಾಜಿಸುತ್ತಿತ್ತು.

Share This Article
Leave a Comment

Leave a Reply

Your email address will not be published. Required fields are marked *