ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

Public TV
1 Min Read

– ಕೊನೆಯ ಕ್ಷಣದಲ್ಲಿ ಪತ್ನಿ, ಮಗುವನ್ನ ನೆನೆದು ಈಜಿ ದಡ ಸೇರಿದ

ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಕಾಣೆಯಾಗಿದ್ದ ಮಂಗಳೂರು ಹೊರವಲಯದ ನೇತ್ರಾವತಿ ಸೇತುವೆ ಮೇಲಿಂದ ವ್ಯಕ್ತಿಯೊಬ್ಬ ನದಿಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಆತ್ಮಹತ್ಯೆಗೆ ಯತ್ನಿಸಿದವರು. ಕೊನೆ ಕ್ಷಣದಲ್ಲಿ ಗಿರೀಶ್ ಪತ್ನಿ, ಮಗುವನ್ನು ನೆನೆದು ನಿರ್ಧಾರವನ್ನು ಬದಲಿಸಿ, ದಡದತ್ತ ಈಜಿಕೊಂಡು ಬಂದಿದ್ದಾರೆ. ಬಳಿಕ ಅವರನ್ನು ಮೀನುಗಾರರು ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.

ಗಿರೀಶ್ ಅವರು ನಗರದ ಉರ್ವ ಸ್ಟೋರ್ ನಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಗಿರೀಶ್ ಅವರ ಪತ್ನಿ ನಗರದ ಕೋರ್ಟ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಗಿರೀಶ್ ಅವರು ಪತ್ನಿ, ಮಗುವಿನೊಂದಿಗೆ ಉರ್ವ ಪಿಡಬ್ಲ್ಯುಡಿ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ.

ಗಿರೀಶ್  ಭಾನುವಾರ ಸಂಜೆ ಮಂಗಳೂರಿನಿಂದ ಉಳ್ಳಾಲ ಕಡೆಗೆ ತೆರಳಿದ್ದಾರೆ. ಈ ವೇಳೆ ನೇತ್ರಾವತಿ ಸೇತುವೆಗೆ ಬಂದ ಅವರು ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಪತ್ನಿ ಹಾಗೂ ಮಗು ನೆನಪಾಗಿ ಬದುಕಬೇಕು ಎಂದು ನಿರ್ಧರಿಸಿ, ಈಜಿ ದಡ ಸೇರಲು ಯತ್ನಿಸಿದ್ದರು. ಗಿರೀಶ್ ನದಿಗೆ ಹಾರಿದ್ದನ್ನು ಮೀನುಗಾರರು ನೋಡಿದ್ದರು. ಹೀಗಾಗಿ ಗಿರೀಶ್ ಈಜಿ ದಡದ ಕಡೆಗೆ ಬರುವುದನ್ನು ಕಂಡು ರಕ್ಷಣೆಗೆ ಮುಂದಾದರು. ಗಿರೀಶ್ ಅವರನ್ನು ರಕ್ಷಿಸಿ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಜುಲೈ 29ರಂದು ಮಂಗಳೂರು-ಉಳ್ಳಾಲ ಸಂಪರ್ಕ ಕಲ್ಪಿಸುವ ಸೇತುವೆಯಿಂದ ಕಾಣೆಯಾಗಿದ್ದರು. ಎರಡು ದಿನಗಳ ಬಳಿಕ ಅಂದರೆ ಜುಲೈ 31ರಂದು ಸಿದ್ಧಾರ್ಥ್ ಅವರ ಮೃತ ದೇಹವು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಈಗ ಗಿರೀಶ್ ಅವರು ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಈ ಸೇತುವೆ ಸುಸೈಡ್ ಪಾಯಿಂಟ್ ಆಯಿತೆ ಎಂಬ ಚರ್ಚೆ ಎದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *