‘Wait & See’ ಹೇಳುತ್ತಲೇ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್ ಆತ್ಮಹತ್ಯೆ

Public TV
2 Min Read

ಲಕ್ನೋ: ‘ವೈಟ್ ಆ್ಯಂಡ್ ಸೀ’ ಎನ್ನುತ್ತಲೇ ತನ್ನ ಮನದರಿಸಿ ಸೇರಿ ಮೂವರನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

33 ವರ್ಷದ ಅಶ್ವನಿ ಕುಮಾರ್ ಅಲಿಯಾಸ್ ಜಾನಿ ದಾದ ಮೂವರನ್ನು ಕೊಲೆಗೈದು ಪರಾರಿಯಾಗಿದ್ದು, ಇದೀಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈತ ಟಿಕ್ ಟಾಕ್ ವಿಡಿಯೋ ಹಾಗೂ ಕೆಲವೊಂದು ಫೋಟೋಗಳನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕಿ ಪೋಸ್ಟ್ ಮಾಡಿಕೊಂಡಿದ್ದನು. ಅಲ್ಲದೆ ನನ್ನ ಹಾನಿ ನೋಡಿ, ಎಲ್ಲವನ್ನೂ ನಾಶ ಮಾಡುತ್ತೇನೆ. ನಾನು ನಂಬಿದವರೇ ನನಗೆ ನೋವುಂಟು ಮಾಡಿ ಅವಮಾನ ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಸುಮ್ಮನೆ ಬಿಡಲ್ಲ ಎಂದೆಲ್ಲ ಬರೆದುಕೊಂಡಿದ್ದನು.

ಸೆಪ್ಟೆಂಬರ್ 26ರಂದು ಬಧಪುರ್ ನ ಬಿಜ್ನೋರ್ ಗೆ ಮದ್ಯಪಾನ ಮಾಡಲೆಂದು ಸ್ಥಳೀಯ ಬಿಜೆಪಿ ನಾಯಕ ಭೀಮ್ ಸಿಂಗ್ ಕಶ್ಯಪ್ ಮಗ 24 ವರ್ಷದ ಚಂದ್ರ ಭೂಷಣ್ ಅಲಿಯಾಸ್ ರಾಹುಲ್ ಹಾಗೂ ಆತನ ಸಹೋದರ 25 ವರ್ಷದ ಕೃಷ್ಣ ಅಲಿಯಾಸ್ ಲಾಲ ಎಂಬಿಬ್ಬರನ್ನು ಕರೆದು ಕೊಲೆ ಮಾಡಿರುವ ಆರೋಪ ಅಶ್ವನಿ ಕುಮಾರ್ ಮೇಲಿತ್ತು.

ಇಷ್ಟು ಮಾತ್ರವಲ್ಲದೆ ಅಶ್ವನಿ, ಮಾಜಿ ಗಗನಸಖಿ 27 ವರ್ಷದ ನಿಖಿತಾ ಶರ್ಮಾಳನ್ನು ಸೆ.30ರಂದು ಆಕೆಯ ಮನೆಯಲ್ಲಿಯೇ ಹತ್ಯೆ ಮಾಡಿದ್ದನು. ಈ ಕೊಲೆಯ ಬಳಿಕ ಅಶ್ವನಿ ದೌಲತಾಬಾದ್ ಅರಣ್ಯ ಪ್ರದೇಶದ ಮೂಲಕ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗೆ ಪೊಲೀಸರು ಹರಸಾಹಸಪಟ್ಟರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಪೊಲೀಸರೊಂದಿಗೆ ಕ್ಷಿಪ್ರ ಕಾರ್ಯಪಡೆ(ಆರ್‍ಎಎಫ್) ಅಧಿಕಾರಿಗಳು ಕೈ ಜೋಡಿಸಿದ್ದರು. ಹೀಗೆ ಪೊಲೀಸರು ಹಾಗೂ ಅಧಿಕಾರಿಗಳು ಅರಣ್ಯದಲ್ಲಿ ಕೊಂಬಿಂಗ್ ಕಾರ್ಯಾಚರಣೆ ನಡೆಸಿದರೂ ಆರೋಪಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಇದನ್ನೂ ಓದಿ: ‘Wait And See’ ಹೇಳುತ್ತಲೇ 5 ದಿನದಲ್ಲಿ ಕ್ರಶ್ ಸೇರಿ ಮೂವರ ಕೊಲೆಗೈದ ಟಿಕ್‍ಟಾಕ್ ಸ್ಟಾರ್

ಸದ್ಯ ಅಶ್ವನಿ ಮೃತಪಟ್ಟಿದ್ದಾನೆ ಎಂದು ಬಿಜ್ನೋರ್ ಪೊಲೀಸ್ ಅಧಿಕ್ಷಕ ಸಂಜೀವ್ ತ್ಯಾಗಿ ಸ್ಪಷ್ಟಪಡಿಸಿದ್ದಾರೆ. ಬಿಜ್ನೋರ್ ನಿಂದ ಪರಾರಿಯಾಗುವ ಸಲುವಾಗಿ ಉತ್ತರಾಖಂಡದ ಡೆಹ್ರಾಡೂನ್ ಗೆ ತೆರಳುತ್ತಿರುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ತನ್ನ ಕೈಯಲ್ಲಿ ರಿವಾಲ್ವರ್ ಹಿಡಿದುಕೊಂಡಿದ್ದನು. ಇದೀಗ ಅದರಲ್ಲಿ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ತಂಡ ಬಧಾಪುರ್ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು. ಶನಿವಾರ ನಸುಕಿನ ಜಾವ 12.45 ರ ಸುಮಾರಿಗೆ ಬಸ್ಸಿನ ಚಾಲಕನ ಪಕ್ಕದಲ್ಲಿರುವ ಮುಂಭಾಗದ ಸೀಟಿನಲ್ಲಿ ಶಂಕಿತ ವ್ಯಕ್ತಿಯೊಬ್ಬ ಕುಳೀತಿದ್ದನು. ಈತ ತನ್ನ ಮುಖವನ್ನು ಕರ್ಚಿಪಿನಿಂದ ಮುಚ್ಚಿಕೊಂಡಿದ್ದನು. ಇದೇ ವೇಳೆ ಪೊಲೀಸರು ಮುಖದ ಮೇಲಿದ್ದ ಬಟ್ಟೆ ತೆಗೆಯುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಪೊಲೀಸರಿಗೆ ತನ್ನ ಕೈಯಲಿದ್ದ ರಿವಾಲ್ವರ್ ನಿಂದ ಹೊಡೆದಿದ್ದಾನೆ. ಅಲ್ಲದೆ ಪೊಲೀಸರು ಆತನ ವಿರುದ್ಧ ಕ್ರಮಕೈಗೊಳ್ಳುವ ಮೊದಲೇ ಆತ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ ಎಂದು ತ್ಯಾಗಿ ವಿವರಿಸಿದ್ದಾರೆ.

ಆ ಬಳಿಕ ಶಂಕಿತನನ್ನು ಜಾನಿ ದಾದ ಎಂದು ಗುರುತಿಸಲಾಯಿತು. ಅಲ್ಲದೆ ಮೂರು ಜನರ ಹತ್ಯೆ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದವನೇ ಆಗಿದ್ದನು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *