ವಿಜಯಪುರ: ಜಿಲ್ಲೆಯ ದರೂರು ಗ್ರಾಮದ ಬಸ್ ನಿಲ್ದಾಣದ ಮೇಲೆ ಆಶ್ರಯ ಪಡೆದಿದ್ದ ನಾಲ್ವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಅವರನ್ನು ಮಾಜಿ ಶಾಸಕ ಲಕ್ಷ್ಮಣ ಸವದಿ ಅವರ ಮನೆಗೆ ಸ್ಥಳಾಂತರಿಸಲಾಗಿದೆ.
ದರೂರ್ ಗ್ರಾಮದಲ್ಲಿ ಹಲವು ಜನ ಸಿಲುಕಿಕೊಂಡಿರುವ ಮಾಹಿತಿಯ ಮೇರೆಗೆ ಸೇನಾ ಹೆಲಿಕಾಪ್ಟರ್ ರಕ್ಷಣೆಗೆ ತೆರಳಿತ್ತು. ಈ ವೇಳೆ ಗ್ರಾಮದ ಬಸ್ ನಿಲ್ದಾಣದ ಮೇಲೆ ಆಶ್ರಯ ಪಡೆದಿದ್ದ ನಾಲ್ವರನ್ನು ರಕ್ಷಣೆ ಮಾಡಲಾಯಿತು.
ಇನ್ನೂ 13 ಜನ ದರೂರು ಗ್ರಾಮದ ಖವಟಕೊಪ್ಪ ರಸ್ತೆಯಲ್ಲಿ ಸಿಲುಕಿರುವ ಮಾಹಿತಿ ಇದ್ದು, ರಕ್ಷಣೆಗಾಗಿ ಸೇನಾ ಹೆಲಿಕಾಪ್ಟರ್ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಿಸಲ್ಪಟ್ಟ ಪರಶುರಾಮ್ ಕುಂಬಾರ್, ಅಶೋಕ ಗಳತಗಿ, ಗುರುಸಿದ್ದಯ್ಯ ಮಠದ, ಹನುಮಂತ ಅವಟಿ ಅವರನ್ನು ಅಥಣಿಯ ಮಾಜಿ ಶಾಸಕ ಲಕ್ಷ್ಮಣ ಸವದಿ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.
ಕೃಷ್ಣಾ ನದಿ ಸಮುದ್ರದಂತೆ ರಭಸವಾಗಿ ಹರಿಯುತ್ತಿದ್ದು, ಅಂತಹ ರಭಸದ ಮಧ್ಯೆ ಕುಟುಂಬ ಸಿಲುಕಿಕೊಂಡಿತ್ತು. ಹುಣಸಿಗಿ ತಾಲೂಕಿನ ಗೆದ್ದಲಮರಿ ನದಿಪಾತ್ರದಲ್ಲಿ ವಾಸವಿದ್ದ ಹಳ್ಳೆಪ್ಪ ಎಂಬವರ ಕುಟುಂಬ ನದಿಯಲ್ಲಿ ಸಿಲುಕಿಕೊಂಡಿತ್ತು. ಹೆಲಿಕಾಪ್ಟರ್ ಬಳಸಿ ಎನ್ಡಿಆರ್ ಎಫ್ ತಂಡ ಕುಟುಂಬದ ರಕ್ಷಣೆ ಮಾಡಿದೆ.