ಪ್ರೀತಿಸಿದ್ದವಳ ಕೈ ಹಿಡಿಯಲು ಹೊರಟಿದ್ದ ಮಧುಮಗ ಅಪಘಾತದಲ್ಲಿ ಸಾವು

Public TV
1 Min Read

ಕಾರವಾರ: ಕಾರು ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಮದುವೆಗೆ ಹೊರಟಿದ್ದ ಮಧುಮಗ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಿವಾಸಿ ಅಫ್ರೋಜ್ ಶೇಖ್ (27) ಮೃತಪಟ್ಟ ಮಧುಮಗ. ಅವಘಾತದಲ್ಲಿ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದು, ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಫ್ರೋಜ್ ಶೇಖ್ ಕೆಲವು ವರ್ಷಗಳಿಂದ ಹಾವೇರಿ ಜಿಲ್ಲೆ ಹಾನಗಲ್ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರವನ್ನು ಪೋಷಕರಿಗೆ ತಿಳಿಸಿ ಮದುವೆಗೆ ಒಪ್ಪಿಸಿದ್ದ. ಯುವತಿಯ ಮನೆಯಲ್ಲೂ ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ಹೀಗಾಗಿ ಇಂದು ಹಾನಗಲ್‍ನಲ್ಲಿ ಅಫ್ರೋಜ್ ಶೇಖ್ ಮದುವೆ ನಿಶ್ಚಯವಾಗಿತ್ತು.

ಅಫ್ರೋಜ್ ಸಂಬಂಧಿಕರ ಜೊತೆಗೆ ಕಾರಿನಲ್ಲಿ ದಾಂಡೇಲಿಯಿಂದ ಹಾನಗಲ್‍ಗೆ ಇಂದು ಬೆಳಗ್ಗೆ ಹೊರಟಿದ್ದ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದ ಅಫ್ರೋಜ್ ಯಲ್ಲಾಪುರ ಪಟ್ಟಣದ ಸಮೀಪದಲ್ಲಿ ನಿಯಂತ್ರಣ ತಪ್ಪಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅಫ್ರೋಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಅಪಘಾತವನ್ನು ನೋಡಿದ ಕೆಲ ಸ್ಥಳೀಯರು ಪೊಲೀಸ್ ಹಾಗೂ ಅಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *