ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆ- ಕೊನೆಗೂ ಬರಲಿಲ್ಲ ಯೋಗಿ ಆದಿತ್ಯನಾಥ್

Public TV
2 Min Read

ಲಕ್ನೋ: ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ ಇಂದು ನೆರವೇರಿತು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರುವವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಸಂತ್ರಸ್ತೆಯ ಕುಟುಂಬಸ್ಥರು ಪಟ್ಟು ಹಿಡಿದಿದ್ದರು. ಆದರೆ ಯೋಗಿ ಆದಿತ್ಯನಾಥ್ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ. ಹೀಗಾಗಿ ನೂರಾರು ಪೊಲೀಸರ ಭದ್ರತೆಯಲ್ಲಿ ಯುವತಿಯ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಸಂತ್ರಸ್ತೆಯ ಸಹೋದರಿ, ಯೋಗಿ ಆದಿತ್ಯನಾಥ್ ಅವರು ಬರುವವರೆಗೂ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡುವುದಿಲ್ಲ. ಜೊತೆಗೆ ನಮ್ಮ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು ಹಾಗೂ ಭದ್ರತೆ ಒದಗಿಸಬೇಕು ಎಂದು ಕೇಳಿಕೊಂಡಿದ್ದರು. ಈ ಮಧ್ಯೆ ಸಂತ್ರಸ್ತೆಯ ಅಕ್ಕ, ತಮ್ಮ, ತಂಗಿಗೆ ಆರೋಪಿಗಳು ಬೆಂಕಿ ಹಚ್ಚಿದ್ದ ಜಾಗಕ್ಕೆ ಹೋಗಿ ಹೂವಿನ ಹಾರ ಹಾಕಿ ಕಣ್ಣೀರಿಟ್ಟಿದ್ದರು.

ಏನಿದು ಪ್ರಕರಣ?:
ಸಂತ್ರಸ್ತ ಯುವತಿ ಮೇಲೆ 2018ರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮಾರ್ಚ್ 5 ಮತ್ತು 6 ರಂದು ಆರೋಪಿಗಳ ವಿರುದ್ಧ ಯುವತಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಶುಭಂ ತ್ರಿವೇದಿ ಎಂಬಾತನನ್ನು ಬಂಧಿಸಿದ್ದರು. ಕಳೆದ ನವೆಂಬರ್ 30ರಂದು ಆರೋಪಿ ಶುಭಂಗೆ ಕೋರ್ಟ್ ಜಾಮೀನು ನೀಡಿತ್ತು. ಡಿಸೆಂಬರ್ 5ರಂದು ಸಾಕ್ಷಿ ಹೇಳಲು ಕೋರ್ಟಿಗೆ ತೆರಳುತ್ತಿದ್ದ ಸಂತ್ರಸ್ತೆ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

ಘಟನೆಯಲ್ಲಿ ಸಂತ್ರಸ್ತೆಯ ದೇಹ ಶೇ.90 ರಷ್ಟು ಹೋಗಿತ್ತು. ಇನ್ನು ಸಾಯುವ ಮುನ್ನ ಸಂತ್ರಸ್ತೆ ”ನನಗೆ ಸಾಯಲು ಇಷ್ಟವಿಲ್ಲ ನನ್ನನ್ನು ಈ ಪರಿಸ್ಥಿತಿಗೆ ತಂದವರು ಸಾಯುವುದನ್ನು ನಾನು ನೋಡಬೇಕು” ಎಂದು ಹೇಳಿಕೊಂಡಿದ್ದರು.

ಬೆಂಕಿ ಹಚ್ಚಿದ್ರು: ಬೆಂಕಿ ಹೊತ್ತಿಕೊಂಡಿದ್ದ ಸಂತ್ರಸ್ತೆಯು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಳು. ಆದರೆ ಬೆಂಕಿಯನ್ನು ಕಂಡು ನಾವು ಭಯಭೀತರಾಗಿದ್ದೇವು. ಯಾರೊಬ್ಬರೂ ರಕ್ಷಣೆಗೆ ನಿಲ್ಲದ ಪರಿಣಾಮ ಸಂತ್ರಸ್ತೆಯು ಸಂಪೂರ್ಣವಾಗಿ ಸುಟ್ಟುಹೋದಳು. ಅಷ್ಟೇ ಅಲ್ಲದೆ ಆಕೆ ಮಾಟಗಾತಿ ಎಂದು ಭಾವಿಸಿದ್ದೇವೆ. ಹೀಗಾಗಿ ಆಕೆಯ ಹಿಂದೆ ಓಡಿ ಕೊಲೆಗೆ ಯತ್ನಿಸಿದ್ದೇವು. ಸಂತ್ರಸ್ತೆಯ ದೇಹ ಶೇ.90ರಷ್ಟು ಸುಟ್ಟ ನಂತರವೂ ಆಕೆ ಸಹಾಯಕ್ಕಾಗಿ ಸುಮಾರು ಒಂದು ಕಿಲೋಮೀಟರ್ ಓಡಿ, ಸ್ವತಃ ಪೊಲೀಸರಿಗೆ ಕರೆ ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *