SBSP ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯ ಬರ್ಬರ ಹತ್ಯೆ

By
2 Min Read

ಲಕ್ನೋ: ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿನಿ ರಾಜ್‌ಭರ್ (30) (Nandini Rajbhar) ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಕೊತ್ವಾಲಿ ಖಲೀಲಾಬಾದ್ ಪ್ರದೇಶದ ಆಕೆಯ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂದಿನಿ ದೇಹದ ಮೇಲೆ ಅನೇಕ ಇರಿತದ ಗಾಯಗಳಿವೆ. ಸುಮಾರು 10 ದಿನಗಳ ಹಿಂದೆ ವರದಿಯಾದ ವಿವಾದದ ಕುರಿತು ಅಪರಿಚಿತ ವ್ಯಕ್ತಿಗಳು ನಂದಿನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಐಜಿ ರಾಮ್ ಕೃಷ್ಣ ಭಾರದ್ವಾಜ್ ಹೇಳಿದ್ದಾರೆ.

ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ಸಂಬಂಧ ಸ್ಥಳೀಯರು 3-4 ಜನರನ್ನು ಹೆಸರಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸ್ಥಳದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

ಪೊಲೀಸರ ಪ್ರಕಾರ, ಎಸ್‌ಬಿಎಸ್‌ಪಿ ನಾಯಕಿಯ ಶವವನ್ನು ಸ್ಥಳೀಯ ಮಹಿಳೆಯೊಬ್ಬರು ಮೊದಲು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಸಂದರ್ಭದಲ್ಲಿ ನಂದಿನಿ ಪತಿ ಮತ್ತು ಏಳು ವರ್ಷದ ಮಗ ದೂರದಲ್ಲಿದ್ದರು.

ಶವವಾಗಿ ಪತ್ತೆಯಾಗಿದ್ದ ಮಾವ: ಈ ಹಿಂದೆ ಎಸ್‌ಬಿಎಸ್‌ಪಿ ನಾಯಕಿಯ ಮಾವ ರೈಲ್ವೇ ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ತನಿಖೆ ಇನ್ನೂ ನಡೆಯುತ್ತಿದೆ. ನಂದಿನಿ ರಾಜ್‌ಭರ್‌ನನ್ನು ಕೊಲೆ ಮಾಡಲಾಗಿದೆ. ಇದಕ್ಕೂ ಮೊದಲು ಅಂದರೆ ಫೆಬ್ರವರಿ 29 ರಂದು ನಂದಿನಿಯ ಮಾವ ಕೂಡ ಕೊಲೆಯಾದರು. ಆದರೆ ಇದನ್ನು ‘ಆತ್ಮಹತ್ಯೆ’ ಎಂದು ಬಿಂಬಿಸಲಾಗಿದೆ. ನಂದಿನಿ ತನ್ನ ಕುಟುಂಬದ ನ್ಯಾಯಕ್ಕಾಗಿ ಹೋರಾಡುತ್ತಿದ್ದಳು ಎಂದು ನಂದಿನಿ ಚಿಕ್ಕಪ್ಪ ರಾಮಗೋಪಾಲ್ ರಾಜಭರ್ ಬೇಸರ ವ್ಯಕ್ತಪಡಿಸಿಸದ್ದಾರೆ.

ಎಸ್‌ಬಿಎಸ್‌ಪಿ ನಾಯಕಿಯ ಹತ್ಯೆಯಲ್ಲಿ ಭಾಗಿಯಾಗಿರುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

Share This Article