ಯೋಗಿ ಸರ್ಕಾರವನ್ನು ವಜಾಗೊಳಿಸಿ ಎಂದಿದ್ದ ಪೊಲೀಸ್ ವಜಾ

Public TV
1 Min Read

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ ಎಂದು ಒತ್ತಾಯಿಸಿದ್ದ ಪೊಲೀಸ್ ಪೇದೆಯನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

ಮನಿಷ್ ಯಾದವ್ ವಜಾಗೊಂಡ ಪೊಲೀಸ್ ಕಾನ್‍ಸ್ಟೇಬಲ್. ಮನಿಷ್ ಯಾದವ್ ಇಟಾವಾ ಮೂಲದರಾಗಿದ್ದು, ನೋಯ್ಡಾದಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಆದರೆ ಶನಿವಾರ ಸಮಾಜವಾದಿ ಪಕ್ಷದ (ಎಸ್‍ಪಿ) ಕೆಂಪು ಟೋಪಿ ಹಾಕಿಕೊಂಡು, ‘ಯೋಗಿ ಸರ್ಕಾರವನ್ನು ವಜಾಗೊಳಿಸಿ’ ಎಂಬ ಪತ್ರಗಳನ್ನು ಸಾರ್ವಜನಿಕರಿಗೆ ಹಂಚುತ್ತ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಮನಿಷ್ ಯಾದವ್ ಅವರು, ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನೋಯ್ಡಾ ಜಿಲ್ಲಾಧಿಕಾರಿ ಜೆ.ಬಿ.ಸಿಂಗ್ ಅವರು, ಮನಿಷ್ ಯಾದವ್ ನನ್ನನ್ನು ಭೇಟಿಯಾಗಿಲ್ಲ. ಅವರ ಬಗ್ಗೆ ಮಾಧ್ಯಮಗಳಿಂದ ಕೇಳಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ಪೇದೆ ಮನಿಷ್ ಯಾದವ್ ಅವರನ್ನು ವಜಾಗೊಳಿಸಿ ಪೊಲೀಸ್ ಮಹಾ ನಿರ್ದೇಶಕ ಒ.ಪಿ.ಸಿಂಗ್ ಆದೇಶ ಹೊರಡಿಸಿದ್ದಾರೆ. ಇತ್ತ ಕಾನ್‍ಸ್ಟೇಬಲ್ ಕುಟುಂಬಸ್ಥರು, ಮನಿಷ್ ಯಾದವ್ ಅವರು ಮಾನಸಿಕವಾಗಿ ತೊಂದರೆಗಿಡಾಗಿದ್ದಾರೆ. ಹೀಗಾಗಿ ಈ ಘಟನೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *