ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

Public TV
1 Min Read

ವಿವಾದ ಹುಟ್ಟುಹಾಕಿದ್ದ ಉರಿಗೌಡ-ನಂಜೇಗೌಡ (Urigowda-Nanjegowda) ಚಿತ್ರ ನಿರ್ಮಾಣವನ್ನು ಸಚಿವ ಮುನಿರತ್ನ (Munirathna) ಕೈಬಿಟ್ಟಿದ್ದಾರೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಭೇಟಿ ಬಳಿಕ ಚಿತ್ರಕ್ಕೆ ಬ್ರೇಕ್‌ ಬಿದ್ದಿದೆ.

ಮಂಡ್ಯದ ಕೊಮ್ಮೇರನಹಳ್ಳಿಯಲ್ಲಿ ಸಚಿವ ಮುನಿರತ್ನ ಮಾತನಾಡಿ, ವೃಷಭ ಪ್ರೊಡಕ್ಷನ್‌ನಲ್ಲಿ ಮೇ 14ರಂದು ಚಿತ್ರೀಕರಣದ ಮುಹೂರ್ತ ಮಾಡಬೇಕು ಅಂದುಕೊಂಡಿದ್ದೆ. ಬಹಳ ದೊಡ್ಡ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆ. ಮೈಸೂರು ಸಂಸ್ಥಾನ ಹಾಗೂ ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು. ಕುಮಾರಸ್ವಾಮಿ ಅವರು ಮುನಿರತ್ನನಿಗೆ ಅಶ್ವಥ್‌ ನಾರಾಯಣ್ ಸಿನಿಮಾ ಮಾಡೋಕೆ ಹೇಳಿರಬೇಕು ಎಂದಿದ್ದರು. ಅಲ್ಲಿಯವರೆಗೆ ನನಗೆ ಸಿನಿಮಾ ಮಾಡುವ ಆಲೋಚನೆ ಇರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ : ಇಂದು ಮಹತ್ವದ ನಿರ್ಧಾರ

ಉರಿಗೌಡ-ನಂಜೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ, ಒಂದಷ್ಟು ಸಿಗುತ್ತಿಲ್ಲ. ನನಗ ಚಿತ್ರ ಮಾಡಬೇಕು ಅನ್ನಿಸಿತು. ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು, ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ‌ ಸಿನಿಮಾವನ್ನು ಇಲ್ಲಿಗೆ ಕೈ ಬಿಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಜನೆ ಮಾಡಿ ಎಂದರು. ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಕೇಳಿದರು. ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಉರಿಗೌಡ-ನಂಜೇಗೌಡ ವಿಚಾರ ಭಾರಿ ಸದ್ದು ಮಾಡುತ್ತಿದೆ. ಟಿಪ್ಪು ಸುಲ್ತಾನ್‌ (Tipu Sultan) ಕೊಂದವರು ಉರಿಗೌಡ-ನಂಜೇಗೌಡ ಎಂದು ಬಿಜೆಪಿ ನಾಯಕರು ಬಿಂಬಿಸಿದ್ದರು. ಚುನಾವಣೆ ಹೊತ್ತಿನಲ್ಲಿ ಒಕ್ಕಲಿಗ ಸಮುದಾಯದ ಓಲೈಕೆಗಾಗಿ ಬಿಜೆಪಿ ವೋಟ್‌ಬ್ಯಾಂಕ್‌ ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸಿದ್ದರು. ಇದರ ಬೆನ್ನಲ್ಲೇ ಈ ಇಬ್ಬರೂ ನಾಯಕರ ಬಗ್ಗೆ ಸಿನಿಮಾ ಮಾಡುವುದಾಗಿ ಸಚಿವ ಮುನಿರತ್ನ ಘೋಷಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *