ಯುವಕರಿಗೆ ಉದ್ಯೋಗ, ಬಡವರಿಗೆ 1 ಕೆಜಿ ಉಚಿತ ತುಪ್ಪ: ಅಖಿಲೇಶ್ ಯಾದವ್ ಭರವಸೆ

Public TV
2 Min Read

ಲಕ್ನೋ: ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಬಡವರಿಗೆ ಒಂದು ಕಿಲೋ ‘ತುಪ್ಪ’ ಜೊತೆಗೆ ಐದು ವರ್ಷಗಳ ಕಾಲ ಉಚಿತ ಪಡಿತರವನ್ನು ನೀಡುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದ್ದಾರೆ.

ಪಡಿತರ ಪಡೆಯುತ್ತಿರುವ ಬಡವರು ಚುನಾವಣೆಯವರೆಗೂ ಮಾತ್ರ ಅದನ್ನು ಪಡೆಯುತ್ತಾರೆ. ಚುನಾವಣೆಯ ನಂತರ ಪಡಿತರ ಲಭ್ಯವಾಗುವುದಿಲ್ಲ. ಮೊದಲು ನವೆಂಬರ್‌ವರೆಗೂ ಪಡಿತರ ನೀಡಬೇಕಾಗಿತ್ತು. ಆದರೆ ಯುಪಿ ಚುನಾವಣೆ ಘೋಷಣೆಯಾದ ಬಳಿಕ ಅದನ್ನು ಮಾರ್ಚ್‍ವರೆಗೆ ನೀಡಲು ಬಿಜೆಪಿ ತಿಳಿಸಿದೆ.

ರಾಯ್ ಬರೇಲಿಯಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಮಾರ್ಚ್‍ನಲ್ಲಿ ಚುನಾವಣೆ ಮುಗಿಯುತ್ತದೆ ಎಂದು ತಿಳಿದಿರುವ ಕಾರಣ ದೆಹಲಿಯ ಬಜೆಟ್‍ನಲ್ಲಿ ಪಡಿತರಕ್ಕಾಗಿ ಹಣವನ್ನು ಮೀಸಲಿಟ್ಟಿಲ್ಲ ಎಂದಿದ್ದಾರೆ.  ಇದನ್ನೂ ಓದಿ: ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

ಈ ಹಿಂದೆ ಸಮಾಜವಾದಿ ಪಕ್ಷ ಬಡವರಿಗೆ ಪಡಿತರ ನೀಡುತ್ತಿತ್ತು. ಎಸ್‍ಪಿ ಸರ್ಕಾರ ಇರುವವರೆಗೂ ನಮ್ಮ ಬಡವರಿಗೆ ಪಡಿತರ ನೀಡುತ್ತೇವೆ. ಅದರೊಂದಿಗೆ ಸಾಸಿವೆ, ಎಣ್ಣೆ ಜೊತೆಗೆ ವರ್ಷದಲ್ಲಿ ಎರಡು ಸಿಲಿಂಡರ್ ಕೊಡುತ್ತೇವೆ. ನಮ್ಮ ಬಡವರ ಆರೋಗ್ಯ ಸುಧಾರಿಸಲು ಒಂದು ಕಿಲೋಗ್ರಾಂ ತುಪ್ಪವನ್ನು ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ವಿತರಿಸುತ್ತಿರುವ ಪಡಿತರ ಗುಣಮಟ್ಟ ಕಳಪೆಯಾಗಿದೆ. ಉಪ್ಪಿನಲ್ಲಿ ಗಾಜಿನ ಕಣಗಳು ಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿದೆ. ಅಲ್ಲದೇ ಗುಜರಾತ್‍ನಿಂದ ಉಪ್ಪು ಬರುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 11 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಮತ್ತು ಎಸ್‍ಪಿ ಸರ್ಕಾರವು ಆ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಕರಿಗೆ ಉದ್ಯೋಗಗಳನ್ನು ಒದಗಿಸುತ್ತದೆ ಎಂದಿದ್ದಾರೆ.  ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು

ಬಿಜೆಪಿ ನಾಯಕರು ಮನೆ, ಮನೆಗೆ ತೆರಳಿ ಮತ ಕೇಳುತ್ತಿದ್ದರು ಮತ್ತು ಬಿಜೆಪಿ ಹಿರಿಯ ನಾಯಕರು ಕರಪತ್ರಗಳನ್ನು ಹಂಚುತ್ತಿದ್ದರು. ಆದರೆ ಈಗ ಆ ಪ್ರಚಾರವನ್ನು ನಿಲ್ಲಿಸಲಾಗಿದೆ. ಏಕೆಂದರೆ ಅವರು ಕೆಲವು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರು ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ತೋರಿಸಿದ್ದಾರೆ. ಖಾಲಿ ಸಿಲಿಂಡರ್‌ಗಳನ್ನು ತೋರಿಸಿದ ದಿನದಿಂದ ಅವರ ಮನೆ-ಮನೆ ಪ್ರಚಾರ ನಿಂತುಹೋಗಿದೆ.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಬಿಜೆಪಿ ಸರ್ಕಾರದಲ್ಲಿ ಅತಿ ಹೆಚ್ಚು ಕಸ್ಟಡಿ ಸಾವುಗಳು ಸಂಭವಿಸಿವೆ. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರವೂ ದುಪ್ಪಟ್ಟಾಗಿದೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *