ಕೆಸಿ ವ್ಯಾಲಿಗೆ ಮತ್ತೆ ಕೊಳಚೆ ನೀರು

Public TV
1 Min Read

ಕೋಲಾರ: ಜಿಲ್ಲೆಗೆ ಹರಿದ ಮೊದಲ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ನೀರು ಮತ್ತೆ ಕಪ್ಪು ಬಣ್ಣ, ವಾಸನೆ, ನೊರೆ ಕಾಣಿಸಿಕೊಂಡಿದೆ. ಕೆಮಿಕಲ್ ಮಿಶ್ರಿತ ನೀರು ಜಿಲ್ಲೆಯ ರೈತರು ಹಾಗೂ ಜನರಲ್ಲಿ ಆತಂಕ ಮೂಡಿಸಿದೆ.

ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಯುತ್ತಿರುವ ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ ಸಂಸ್ಕರಿಸಿದ ನೀರು ಸದ್ಯ ಜಿಲ್ಲೆಯ 35ಕ್ಕೂ ಹೆಚ್ಚು ಕೆರಗಳನ್ನ ತುಂಬಿದೆ. ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಸಲುವಾಗಿ 1400 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಸಂಸ್ಕರಿಸಿದ ಕೊಳಚೆ ನೀರನ್ನ ಜಿಲ್ಲೆಯ ಕೆರೆಗಳಿಗೆ ಹರಿಸುವುದು ಯೋಜನೆಯ ಉದ್ದೇಶ. ಕೋಲಾರ ತಾಲೂಕಿನ ಲಕ್ಷ್ಮಿ ಸಾಗರ ಕೆರೆಯಲ್ಲಿ ಕಲುಷಿತ ನೊರೆ, ಕಪ್ಪು ಬಣ್ಣದ ನೀರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಆತಂಕ ಎದುರಾಗಿದೆ. ಇದನ್ನೂ ಓದಿ: ಕೆಸಿ ವ್ಯಾಲಿ ಮೂಲಕ ಕೋಲಾರಕ್ಕೆ ಬೆಂಗ್ಳೂರಿನ ನೊರೆ ನೀರು!

ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರು ನೀರು 2 ಹಂತದಲ್ಲಿ ಶುದ್ಧೀಕರಣವಾಗದೆ ಜಿಲ್ಲೆಗೆ ಹರಿಸಲಾಗುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಆರೋಪಿಸುತ್ತಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ನೀರಿನ ಗುಣಮಟ್ಟ ಪರಿಶೀಲನೆ ನಡೆಸಿದರು. ನೊರೆ ಹಾಗೂ ಕಪ್ಪು ಬಣ್ಣದ ನೀರನ್ನು ಪರಿಶೀಲನೆಗೆ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಕೆ.ಸಿ.ವ್ಯಾಲಿ ಯೋಜನೆಗೆ ನೊರೆ ಮಿಶ್ರಿತ ನೀರು ಹರಿಸುವುದನ್ನ ನಿಲ್ಲಿಸಿ-ರೈತರಿಂದ ಪ್ರತಿಭಟನೆ

ಕಳೆದ ಒಂದು ವಾರದಿಂದ ಕೆಮಿಕಲ್ ಮಿಶ್ರಿತ ಕಪ್ಪು ಬಣ್ಣದ ನೀರು ಕಾಣಿಸಿಕೊಂಡಿದೆ. ಬೆಳಂದೂರು ಮಾದರಿಯ ನೊರೆ ಕಾಣಿಸಿಕೊಳ್ಳುತ್ತಿದ್ದು, ಮಲೀನ ನೀರು ಜಿಲ್ಲೆಗೆ ರವಾನೆಯಾಗುತ್ತಿದ್ದಿಯಾ ಅನ್ನೋ ಅನುಮಾನ ಜಿಲ್ಲೆಯ ರೈತರು, ಜನರಲ್ಲಿ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *