ದೇಶದಲ್ಲಿ ಇದೂವರೆಗೂ ನಡೆದಿರುವ ವಿಚಾರವಾದಿಗಳ ಹತ್ಯೆಯಾಗಿದ್ದು ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

Public TV
2 Min Read

ಬೆಂಗಳೂರು: ಮಂಗಳವಾರ ನಗರದಲ್ಲಿ ವಿಚಾರವಾದಿ, ಹಿರಿಯ ಪತ್ರಕರ್ತೆಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆಯಾಗಿದ್ದು, ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಒಳಪಟ್ಟಿದೆ. ಈ ಹಿಂದೆ ಧಾರವಾಡದಲ್ಲಿಯೂ ಸಾಹಿತಿ, ವಿಚಾರವಾದಿ ಎಂ.ಎಂ.ಕಲ್ಬುರ್ಗಿಯವರ ಹತ್ಯೆಯೂ ನಡೆದಿತ್ತು. ಹೀಗಾಗಿ ದೇಶದಲ್ಲಿ ಈ ಹಿಂದೆ ನಡೆದಿರುವ ವಿಚಾರವಾದಿಗಳ ಹತ್ಯೆ ಬಗ್ಗೆ ಸಂಕ್ಷಿಪ್ತ ವಿವರಣೆ ಇಲ್ಲಿದೆ

1. ಎಂ.ಎಂ.ಕಲಬುರ್ಗಿ: ಕರ್ನಾಟಕದ ವಿಚಾರವಾದಿಯಾಗಿದ್ದ ಕಲಬುರ್ಗಿ ಅವರು ಸಂಶೋಧಕ, ಲೇಖಕ, ವಚನ ಸಾಹಿತ್ಯ ಸಂಗ್ರಹ, ಕನ್ನಡದ ಶಾಸನ ಪಂಡಿತರು ಹಾಗು ಹಂಪಿ ವಿವಿ ಮಾಜಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಆಗಸ್ಟ್ 30 2015ರಂದು ಧಾರವಾಡದ ಅವರ ನಿವಾಸಕ್ಕೆ ವಿದ್ಯಾರ್ಥಿಗಳ ಹೆಸರಲ್ಲಿ ಬಂದ ದುಷ್ಕರ್ಮಿಗಳು ಎದೆ ಮತ್ತು ತಲೆಗೆ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದರು.

ಕಲಬುರ್ಗಿ ಅವರು ಮೌಢ್ಯ, ಮೂರ್ತಿ ಪೂಜೆ ಮತ್ತು ಹಿಂದುತ್ವ ವಿಚಾರಗಳನ್ನು ವಿರೋಧಿಸುತ್ತಿದ್ದರು. ಕೊಲೆಯಾದ ಎರಡು ವರ್ಷ ಕಳೆದರೂ ಇದೂವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಕಲಬುರ್ಗಿಯವರ ಹತ್ಯೆಯ ಸಂಬಂಧ ಸಿಐಡಿ ತನಿಖೆ ನಡೆಸಲಾಗುತ್ತಿದೆ.

2. ನರೇಂದ್ರ ದಾಭೋಲ್ಕರ್: ಮಹಾರಾಷ್ಟ್ರದ ವಿಚಾರವಾದಿಗಳಾಗಿದ್ದ ದಾಬೋಲ್ಕರವರನ್ನು 20 ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದಾಬೋಲ್ಕರ್ ಅವರ ತಲೆ ಮತ್ತು ಎದೆ ಭಾಗಕ್ಕೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಬೆಳಗ್ಗೆ ದಾಬೋಲ್ಕರ್ ವಾಹು ವಿಹಾರಕ್ಕೆ ತೆರಳಿದ್ದಾಗ ಇಬ್ಬರೂ ಅಪರಿಚಿತರು ಗುಂಡಿನ ಮಳೆಗೈದಿದ್ದರು. ಮೂಲತಃ ವೈದ್ಯರಾಗಿದ್ದ ದಾಬೋಲ್ಕರ್ ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಮೂಢನಂಬಿಕೆಗಳ ವಿರುದ್ಧ ಹೋರಾಟವನ್ನು ಮಾಡಿ ಜನರನ್ನು ಜಾಗೃತರನ್ನಾಗಿಸುತ್ತಿದ್ದರು.

3. ಗೋವಿಂದ್ ಪನ್ಸಾರೆ: ಮಹಾರಾಷ್ಟ್ರದ ವಿಚಾರವಾದಿಗಳಾಗಿದ್ದ ಗೋವಿಂದ್ ಪನ್ಸಾರೆ ಮಾರ್ಕಿಸ್ಟ್, ವಕೀಲ, ಲೇಖಕ, ಸಾಮಾಜಿಕ ಕಾರ್ಯಕರ್ತರಾಗಿ ಪರಿಚತರಾಗಿದ್ದರು. 16 ಫೆಬ್ರವರಿ 2015ರಂದು ಬೆಳಗ್ಗೆ ಪತ್ನಿ ಜೊತೆ ವಾಯು ವಿಹಾರ ಮುಗಿಸಿ ಮನೆ ಮುಂದೆ ಬಂದಾಗ ಕತ್ತು ಮತ್ತು ಎದೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ಬೈಕಿ ನಲ್ಲಿ ಬಂದ ಇಬ್ಬರೂ ದುಷ್ಕರ್ಮಿಗಳು ಗೋವಿಂದ್ ಮತ್ತು ಅವರ ಪತ್ನಿ ಉಮಾರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿ ಬಳಿಕ ಆಗಸ್ಟ್ 20, 2015ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಘಟನೆಯ ವೇಳೆ ಸ್ಥಳದಲ್ಲಿದ್ದ ಉಮಾರಿಗೂ ತಲೆಗೆ ಗುಂಡು ತಗುಲಿತ್ತು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. 2015ರ ಸೆಪ್ಟೆಂಬರ್‍ನಲ್ಲಿ ಆರೋಪಿ ಸಮೀರ್ ಗಾಯಕ್ವಾಡ್ ಬಂಧನವಾಗಿದ್ದು, ಆರೋಪಿ ಸನಾತನ ಸಂಸ್ಥೆ ಕಾರ್ಯಕರ್ತ ಎಂದು ಹೇಳಲಾಗಿದೆ. ಸದ್ಯ 2017  ಜೂನ್ ತಿಂಗಳಲ್ಲಿ ಸಮೀರ್ ಗಾಯಕ್ವಾಡ್ ಗೆ ಕೋಲ್ಹಾಪುರ ನ್ಯಾಯಾಲು ಜಾಮೀನು ನೀಡಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.

ಮಂಗಳವಾರ ರಾತ್ರಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ದೇಹವನ್ನು ಮೃತ ದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಬಳಿ ಇರಿಸಲಾಗುವುದು. ಅಂತಿಮ ದರ್ಶನದ ಬಳಿಕ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು.

Share This Article
Leave a Comment

Leave a Reply

Your email address will not be published. Required fields are marked *