ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಗೆ ಭಾರೀ ಮುಖಭಂಗ

Public TV
1 Min Read

ನ್ಯೂಯಾರ್ಕ್: ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕೆಂದು ವಿಶ್ವಸಂಸ್ಥೆಯ ಮೊರೆ ಹೋಗಿದ್ದ  ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡಿದ ವಿಚಾರ ಸಂಬಂಧ ಪಾಕಿಸ್ತಾನ  ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದು ವಿಶ್ವಸಂಸ್ಥೆಯ ನಿರ್ಧಾರವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ನೀಡಿತ್ತು. ಅಷ್ಟೇ ಅಲ್ಲದೇ ಎರಡು ದೇಶಗಳ ಮಧ್ಯೆ ಸಂಧಾನ ಮಾಡುವಂತೆ ಮನವಿ ಮಾಡಿತ್ತು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೆ  ಜೊವಾನ್ನಾ ವ್ರೊನೆಕ್ಕಾ ಹೇಳಿದ್ದಾರೆ.

ಪಾಕ್ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಬಂದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ವಿಶ್ವಂಸಂಸ್ಥೆಯ ಅಧ್ಯಕ್ಷ ಆಂಟೋನಿಯೋ ಗುಟೆರಸ್ ಅವರ ವಕ್ತಾರರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಶಿಮ್ಲಾ ಒಪ್ಪಂದದ ಪ್ರಕಾರ ದ್ವಿಪಕ್ಷೀಯ ಮಾತುಕತೆಯ ಮೂಲಕ ಈ ರಾಷ್ಟ್ರಗಳು ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಹೀಗಾಗಿ ನಾವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಪದೇ ಪದೇ ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಿಸುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ವಿಶ್ವಸಂಸ್ಥೆಗೆ ದೂರು ನೀಡಿತ್ತು. ಅಷ್ಟೇ ಅಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳು ಸಹ ತನ್ನ ಪರವಾಗಿ ನಿಲ್ಲಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಪಾಕ್ ಮಿತ್ರ ಚೀನಾ ಹೊರತುಪಡಿಸಿ ವಿಶ್ವದ ಯಾವುದೇ ಬಲಾಢ್ಯ ರಾಷ್ಟ್ರಗಳು ಭಾರತ ಕೈಗೊಂಡ ಐತಿಹಾಸಿಕಾ ನಿರ್ಧಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ ಬಳಿಕ ಪಾಕಿಸ್ತಾನ ಭಾರತದ ಭಾರತೀಯ ಚಲನ ಚಿತ್ರ, ಸಂಜೋತಾ ರೈಲು ಸ್ಥಗಿತ, ದ್ವಿಪಕ್ಷೀಯ ವ್ಯಾಪಾರ ಸ್ಥಗಿತ, ರಾಯಭಾರಿಯನ್ನು ಉಚ್ಚಾಟನೆ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *