ದೀಕ್ಷೆ ಕೊಟ್ಟ ಗುರುವಿನ ಆರೋಗ್ಯ ವಿಚಾರಿಸಿದ ಉಮಾಭಾರತಿ

Public TV
1 Min Read

ಉಡುಪಿ: ದೀಕ್ಷೆ ಕೊಟ್ಟ ಗುರುವಿಗೆ ಅಪಘಾತದ ಸುದ್ದಿ ಕೇಳಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಉಮಾಭಾರತಿ ಮೊದಲು ಪೇಜಾವರ ಮಠಕ್ಕೆ ಆಗಮಿಸಿ ಪೇಜಾವರಶ್ರೀಗೆ ಗೌರವ ಸಲ್ಲಿಸಿದರು. ನಂತರ ಸ್ವಾಮೀಜಿಯನ್ನು ಕಂಡು ಮಾತನಾಡಿಸಿ ನಿಟ್ಟುಸಿರು ಬಿಟ್ಟು ಅಪಘಾತ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ತಾವು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಸ್ವಾಮೀಜಿಗೆ ಕಿವಿಮಾತು ಹೇಳಿದರು.

ಪೇಜಾವರ ಶ್ರೀ ಶಿಷ್ಯೆಯಾಗಿರುವ ಉಮಾಭಾರತಿ ಕಳೆದ ಎರಡು ವರ್ಷದಲ್ಲಿ ಉಡುಪಿಗೆ ಮೂರು ಬಾರಿ ಭೇಟಿ ನೀಡಿದ್ದಾರೆ. ಇದೇ ಸಂದರ್ಭ ಪಂಚಮ ಪರ್ಯಾಯ ಮುಗಿಸಿ ಸರ್ವಜ್ಞ ಪೀಠದಿಂದ ಏಳುವ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಕ್ಷಮೆಯನ್ನು ಕೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಉಮಾಭಾರತಿ, ಸ್ವಾಮೀಜಿಗೆ ಅಪಘಾತ ಸುದ್ದಿ ಕೇಳಿ ಆಘಾತವಾಯ್ತು. ಕೆಲಸವನ್ನೆಲ್ಲ ಬದಿಗೊತ್ತಿ ಉಡುಪಿಗೆ ಓಡೋಡಿ ಬಂದೆ. ಸ್ವಾಮೀಜಿಯವರನ್ನು ಭೇಟಿ ಮಾಡಿ ಈಗ ನಿರಾಳವಾಗಿದ್ದೇನೆ. ಸ್ವಾಮೀಜಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನಿಗೆ ಹೊಡೆತ ಬಿದ್ದಿದ್ದರಿಂದ ಹೆಚ್ವಿನ ವಿಶ್ರಾಂತಿ ಅವಶ್ಯಕತೆ ಇದೆ. ವೈದ್ಯರ ಸೂಚನೆಯನ್ನು ಪಾಲಿಸಬೇಕು ಎಂದು ಸ್ವಾಮೀಜಿ ಬಳಿ ಉಮಾಭಾರತಿ ನಿವೇದಿಸಿರುವುದಾಗಿ ಹೇಳಿದರು.

ಪೇಜಾವರಶ್ರೀ ಪಂಚಮ ಪರ್ಯಾಯ ಮುಗಿಸಿದ್ದಾರೆ. ಗುರೂಜಿ ಪಂಚಮ ಪರ್ಯಾಯ ಐತಿಹಾಸಿಕವಾದದ್ದು, ಅವರು ಗುಣಮುಖರಾದ ಕೂಡಲೇ ಉಡುಪಿಯಲ್ಲೇ ದೊಡ್ಡ ಸಂಭ್ರಮಾಚರಣೆ ಮಾಡುತ್ತೇನೆ. ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮ ರಾಜಕೀಯೇತರವಾಗಿ ಇರುತ್ತದೆ. ಆಮಂತ್ರಣ ಮಾಡಿಸಲ್ಲ, ಪುಣ್ಯವಂತರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ರಾಜ್ಯ ಮತ್ತು ಕೇಂದ್ರದ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದು ಉಮಾಭಾರತಿ ಹೇಳಿದರು.

1992ರ ನವೆಂಬರ್ 17ರಂದು ಉಮಾ ಭಾರತಿ ಅವರಿಗೆ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆ ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *