ಕಾರವಾರ: ಜಾತಿ ಜಾತಿ ಗಳ ನಡುವೆ ಫಿಟ್ಟಿಂಗ್ ಇಟ್ಟಿರುವ ಫಿಟ್ಟಿಂಗ್ ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಟೀಕಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮೂಡ ಗಣಪತಿ ದೇವಸ್ಥಾನದ ವೇದಿಕೆಯಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಕ್ರಿಮಿನಲ್ ಗಳನ್ನು ಬಗಲಲ್ಲಿ ಕೂರಿಸಿಕೊಂಡು ನಡೆಯುತ್ತಿದೆ. ಜಿಹಾದಿಗಳು ಊರಿಗೆ ಹೋಗಿ ಬೆಂಕಿ ಇಟ್ಟು ಮನೆಯಲ್ಲಿ ಕೂರುತ್ತಾರೆ. ಅವರ ಎದುರು ಬಕೆಟ್ ಇಟ್ಟು ಕೂರುತ್ತಾರೆ. ಎಂತಹ ಗತಿಗೆಟ್ಟ ಸರ್ಕಾರವನ್ನು ಯಾವತ್ತೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಜೈಲಿನಲ್ಲಿರುವ ಅಲ್ಪಸಂಖ್ಯಾತ ಕ್ರಿಮಿನಲ್ ಗಳನ್ನು ಹೊರತಂದು ಈ ಚುನಾವಣೆಯಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ, ಸುಭೀಕ್ಷ ಕರ್ನಾಟಕವನ್ನು ದರಿದ್ರ ಕರ್ನಾಟಕ ಮಾಡಿದ್ದಾರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಕೆಲವರು ಪ್ರಶಸ್ತಿಗಳನ್ನು ಮರಳಿಸುತ್ತೇವೆ ಎಂದಿದ್ದರು. ನಾವೇ ಬುಟ್ಟಿ ತಂದು ಇಡುತ್ತೇವೆ ನಿಮ್ಮ ಪ್ರಶಸ್ತಿ ವಾಪಾಸ್ ತಂದು ಕೊಡಿ ಎಂದು ಟಾಂಗ್ ಕೊಟ್ಟರು.
ಜನಸುರಕ್ಷಾ ಯಾತ್ರೆ ಮುಗಿಸಿದ ನಂತರ ಬೆಂಗಳೂರು ಚಲೋ ಪ್ರಾರಂಭಿಸುತ್ತೇವೆ. ಜಿಲ್ಲೆಯಲ್ಲಿ ಶನಿವಾರದಿಂದ ಅಂಕೋಲದಲ್ಲಿ ಆರಂಭವಾದ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಇಂದು ಹೊನ್ನಾವರದ ಮೂಲಕ ಭಟ್ಕಳದಲ್ಲಿ ಸಾಗಿ ಉಡುಪಿ ಮೂಲಕ ಮಂಗಳೂರಿನಲ್ಲಿ ಮುಕ್ತಾಯವಾಗಲಿದೆ.
https://www.youtube.com/watch?v=86FBXuAV_nE