ಬಂದ ದಾರಿಗಿಲ್ಲ ಸುಂಕ – ದೆಹಲಿಯಲ್ಲಿ ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ

Public TV
2 Min Read

– ರಾಘವೇಂದ್ರ ಸೋಲಿಸಬೇಕು ಎನ್ನುವುದು ಅಮಿತ್ ಶಾ ಅಪೇಕ್ಷೆ ಎಂದ ಈಶ್ವರಪ್ಪ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆಯಾಗಿದೆ. ಭೇಟಿಗೆ ಗೃಹ ಸಚಿವರು ಸಿಗದೇ ಹೋದದ್ದು, ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ.

ಬುಧವಾರ ಈಶ್ವರಪ್ಪ ದೆಹಲಿಗೆ ಬಂದಾಗ, ಅಮಿತ್ ಶಾ ಕಚೇರಿಯಿಂದ ದೂರವಾಣಿ ಕರೆ ಬಂದಿತು. ಗೃಹ ಸಚಿವರು ಭೇಟಿಯಾಗುವುದಿಲ್ಲ ಎಂಬ ಸಂದೇಶ ನೀಡಲಾಯಿತು. ಈ ಹಿನ್ನೆಲೆ ಬೆಂಗಳೂರಿಗೆ ಮರಳಲು ಈಶ್ವರಪ್ಪ ನಿರ್ಧಾರ ಮಾಡಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಈಶ್ವರಪ್ಪ, ಅಮಿತ್ ಶಾ ಭೇಟಿಯಾದರೂ, ಭೇಟಿಯಾಗದಿದ್ದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಈಗ ಅಮಿತ್ ಶಾ ಭೇಟಿಯಾದಿರುವುದು ಚುನಾವಣೆಗೆ ಸ್ಪರ್ಧಿಸಲು ಸಂದೇಶ ನೀಡದಂತೆ ಎಂದು ತಿಳಿಸಿದ್ದಾರೆ.

ಅಮಿತ್‌ ಶಾ ಹೇಳಿದರು ಅಂತಾ ದೆಹಲಿಗೆ ಬಂದೆ. ಅವರು ಸಿಗಲ್ಲ ಅಂತಾ ಹೇಳಿದರು. ಈಶ್ವರಪ್ಪ ನಿಲ್ಲಲಿ, ರಾಘವೇಂದ್ರ ಸೋಲಿಸಬೇಕು ಎನ್ನುವುದು ಅಮಿತ್ ಶಾ ಆಪೇಕ್ಷೆ. ನಾನು ಮೋದಿ, ಅಮಿತ್ ಶಾ ಆಶೀರ್ವಾದದಿಂದ ಗೆಲ್ಲುತ್ತೇನೆ. ಎಲ್ಲರ ಸಹಕಾರದಲ್ಲಿ ನಾನು ಚುನಾವಣೆ ಗೆದ್ದು, ಮೋದಿ ಕೈ ಬಲಪಡಿಸುತ್ತೇನೆ ಎಂದು ಹೇಳಿದ್ದಾರೆ.

ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದೆವು. ಬಿಎಸ್‌ವೈ ಬೆನ್ನು ತಟ್ಟುವ ಬದಲು ಅಮಿತ್ ಶಾ ದೂರು ನೀಡಿದರು. ಅಮಿತ್ ಶಾ ಮಾತು‌ ಕೇಳಿ ಸಂಘಟನೆ ನಿಲ್ಲಿಸಿದೆ. ಬಿಎಸ್‌ವೈ ಕುಟುಂಬಕ್ಕೆ ಒಂದು ನೀತಿ, ನಮಗೆ ಒಂದು ನೀತಿನಾ? ಅವರ ಮನೆಯಲ್ಲಿ ಸಂಸದ, ಶಾಸಕ, ರಾಜ್ಯಾಧ್ಯಕ್ಷ ಆಗಿದ್ದಾರೆ. ನಮ್ಮ‌ ಮನೆಯಲ್ಲಿ ಶಾಸಕನೂ ಇಲ್ಲ ಸಂಸದನೂ ಇಲ್ಲ. ನಾನು ಶಾಸಕರಾಗಿ ನನ್ನ ಮಗನಿಗೆ ಟಿಕೆಟ್ ಕೇಳ್ತಿಲ್ಲ. ಬಿಜೆಪಿಯಲ್ಲಿ ನೀತಿ ನಿಯಮದ ಪ್ರಕಾರ ನಡೆದುಕೊಂಡು ಬಂದಿದ್ದೇನೆ ಎಂದು ಪಕ್ಷದ ವಿರುದ್ಧ ಬೇಸರ ಹೊರಹಾಕಿದ್ದಾರೆ.

ನಾನು ಈಗಾಗಲೇ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿದ್ದೇನೆ. ಆದರೆ ಬೇಡ ಎಂದು ಅವರು ಮನವಿ ಮಾಡಿದರು. ಗೃಹ ಸಚಿವರು ನೀವೂ ಸೂಚನೆ ಕೊಡಿ ಎಂದು ಮನವಿ ಮಾಡಿದೆ. ಬಳಿಕ ದೆಹಲಿಗೆ ಬಂದು ಭೇಟಿ ಮಾಡುವಂತೆ ಹೇಳಿದ್ದರು ಎಂದು ನಿನ್ನೆಯ ಸಂದರ್ಭ ಕುರಿತು ಮಾತನಾಡಿದ್ದಾರೆ.

Share This Article