ಕೇಂದ್ರದ ನೀತಿಯೇ ರಾಜೀನಾಮೆಗೆ ಕಾರಣ- ಸಸಿಕಾಂತ್ ಸೆಂಥಿಲ್

Public TV
2 Min Read

ಮಂಗಳೂರು: ಐಎಎಸ್ ಅಧಿಕಾರಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಶುಕ್ರವಾರ ರಾಜೀನಾಮೆ ನೀಡಿ ಸೇವೆಯಿಂದ ದೂರ ಉಳಿದಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದರು ಅನ್ನೋದು ನಿಗೂಢವಾಗಿಯೇ ಇದ್ದು ಇಂದು ಸ್ಫೋಟಕ ಕಾರಣವನ್ನು ಹೊರ ಹಾಕಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಸೆಂಥಿಲ್ ಅವರನ್ನು ಮಾತನಾಡಿಸಿದಾಗ, ಕೇಂದ್ರ ಸರ್ಕಾರದ ಈಗಿನ ನೀತಿಯೇ ನನ್ನ ರಾಜೀನಾಮೆಗೆ ಕಾರಣ. ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಒಪ್ಪಿಗೆ ಇಲ್ಲ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಸಂಭಾಷಣೆ ಹೀಗಿದೆ:
ಪ್ರತಿನಿಧಿ: ರಾಜೀನಾಮೆ ಕಾರಣ ಸರ್
ಸಸಿಕಾಂತ್ ಸೆಂಥಿಲ್: ಕಾರಣ ಇಷ್ಟೇ, ಕೇಂದ್ರ ಸರ್ಕಾರದ ಪಾಲಿಸಿಗಳು ಸೈದ್ಧಾಂತಿಕವಾಗಿ ನನಗೆ ಒಪ್ಪಿಗೆ ಇಲ್ಲ ಅಷ್ಟೇ.
ಪ್ರತಿನಿಧಿ: ಕೇಂದ್ರ ಸರ್ಕಾರನಾ ಸರ್ ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಬೇಸತ್ತು ಸಸಿಕಾಂತ್ ಸೆಂಥಿಲ್ ರಾಜೀನಾಮೆ?

ಸಸಿಕಾಂತ್ ಸೆಂಥಿಲ್: ಅಂದ್ರೆ ನಮ್ಮ ರಾಜ್ಯ ಸರ್ಕಾರಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ. ಈಗ ನ್ಯಾಷನಲ್ ಲೆವೆಲ್ ಪಾಲಿಸಿ ಏನ್ ನಡೀತಾ ಇದೆ, ನನ್ನ ವೈಯಕ್ತಿಕ ನಿಲುವುಗಳಿಗೆ ಅದು ಸರಿ ಹೊಂದುತ್ತಿಲ್ಲ.
ಪ್ರತಿನಿಧಿ :ಅದು ಕಷ್ಟ ಆಗ್ತಿದೆಯಾ ಸರ್

ಸಸಿಕಾಂತ್ ಸೆಂಥಿಲ್: ಈಗ ತಾವು ನೋಡ್ತಾ ಇದ್ದೀರಲ್ಲ, ರಾಷ್ಟ್ರೀಯ ಲೆವಲ್‍ನಲ್ಲಿ ಏನೇನು ನಡೀತಿದೆ, ಯಾವ ರೀತಿ ರಾಜಕೀಯ ನಡೆಯುತ್ತಿದೆ ಅನ್ನೋದನ್ನು ನೀವೂ ನೋಡ್ತಿದ್ದೀರಲ್ಲ, ನನಗೂ ಅದಕ್ಕೂ ಒಪ್ಪಿಗೆ ಇಲ್ಲದಿರೋದ್ರಿಂದ ನಾನು ಸೇವೆಯಿಂದ ಹೊರಗೆ ಹೋಗ್ತಾ ಇದ್ದೇನೆ ಅಷ್ಟೇ. ನಮ್ಮ ರಾಜ್ಯ ಸರ್ಕಾರಕ್ಕೂ, ಅದಕ್ಕೂ ಸಂಬಂಧನೇ ಇಲ್ಲ

ಪ್ರತಿನಿಧಿ: ಕಾಶ್ಮೀರ ವಿಚಾರ ಏನಾದ್ರೂ ಬೇಜಾರಾಗಿದ್ದೀಯಾ?
ಸಸಿಕಾಂತ್ ಸೆಂಥಿಲ್: ಕಾಶ್ಮೀರ ವಿಚಾರನೂ ನನ್ನ ರಾಜೀನಾಮೆಯ ಒಂದು ಭಾಗ ಇದೆ.

ಆಗಸ್ಟ್ 3ರಿಂದ ರಜೆಯಲ್ಲಿ ತೆರಳಿರುವ ಜಿಲ್ಲಾಧಿಕಾರಿ ಸೆಂಥಿಲ್ ಅವರು ಶುಕ್ರವಾರ ಧಿಡೀರ್ ಆಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ನೈತಿಕವೆಂದು ನನಗೆ ಅನಿಸುತ್ತಿಲ್ಲ. ಸಂವಿಧಾನದ ಮೂಲ ಆಶಯಗಳು ಕಾಣೆಯಾಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಅಡೆತಡೆ ಬರುವ ಸಾಧ್ಯತೆಯಿದೆ. ಜೊತೆಗೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು.

2009ರ ಬ್ಯಾಚಿನ ಈ ಅಧಿಕಾರಿ 2017 ಅಕ್ಟೋಬರ್ ತಿಂಗಳಿಂದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಸಸಿಕಾಂತ್ ಅವರು ಕೆಲಸ ಮಾಡಿದ್ದರು. ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಸಿಂಧೂ ಬಿ. ರೂಪೇಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಯಾರು ಈ ಸಿಂಧೂ?
ಮೈಸೂರು ಮೂಲದ ಸಿಂಧೂ ಬಿ.ಇ ಪದವೀಧರರಾಗಿದ್ದಾರೆ. ಎರಡು ವರ್ಷ ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿ, ನಂತ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಯುಪಿಎಸ್‍ಸಿ ಪರೀಕ್ಷೆ ಬರೆದು 17ನೇ ರ್ಯಾಂಕ್ ಪಡೆದು ತೇರ್ಗಡೆಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *