ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

Public TV
1 Min Read

ರಾಯಚೂರು: ಹಸಿರು ಬಣ್ಣದ ಪಾಚಿಗಟ್ಟಿದ ಕೊಳಚೆ ನೀರನ್ನ ಕನಿಷ್ಠ ಪ್ರಮಾಣದ ಶುದ್ಧೀಕರಣವನ್ನೂ ಮಾಡದೇ ನಗರ ಸಭೆ ಕೊಳಾಯಿಗೆ ನೇರವಾಗಿ ಬಿಡುಗಡೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ರಾಂಪುರ ಕೆರೆಯಿಂದ ನಗರಕ್ಕೆ ಹರಿಸುವ ನೀರನ್ನ ಶುದ್ದೀಕರಿಸುವ ಕನಿಷ್ಠ ಕೆಲಸವನ್ನೂ ನಗರಸಭೆ ಮಾಡುತ್ತಿಲ್ಲ. ಶುದ್ಧೀಕರಣ ಘಟಕ ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದು ಹೋಗಿದೆ. ಇಲ್ಲಿನ ಯಂತ್ರೋಪಕರಗಳು ತುಕ್ಕು ಹಿಡಿದಿದ್ದು ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕೆಲಸದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಕೊಳಚೆ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

ನೀರಿನಲ್ಲಿ ಹುಳು, ಕಸಕಡ್ಡಿ ಬರುವುದರಿಂದ ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಲ ಮೂಲದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣ, ತುಂಗಾಭದ್ರ ಎರಡು ನದಿಗಳಿದ್ದರೂ ಕೊಳಚೆ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವತಃ ವೈದ್ಯರಾಗಿದ್ದರೂ ಜನರಿಗೆ ಶುದ್ಧ ನೀರನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾಯಿಕೊಡೆಯಂತೆ ತಲೆಎತ್ತಿಕೊಳ್ಳುತ್ತಿವೆ.

ಒಟ್ನಲ್ಲಿ ರಾಯಚೂರಿನ ಜನತೆ ನಿತ್ಯ ನರಕವನ್ನ ನೋಡುತ್ತಿದ್ದು, ಇದೇ ಸ್ವರ್ಗ ಅಂತ ಆಸ್ಪತ್ರೆಯ ಬಿಲ್ಲು ಕಟ್ಟುತ್ತಾ ಬದುಕುತ್ತಿದ್ದಾರೆ. ಇಲ್ಲಿನ ಜನ ಇನ್ನೂ ಬದುಕಿದ್ದಾರೆ ಅಂತ ನಗರಸಭೆ ಹಾಗೂ ಜಿಲ್ಲಾಡಳಿತ ಮಲೀನವಾದ ನೀರನ್ನೇ ಕುಡಿಯಲು ಸರಬರಾಜು ಮಾಡುತ್ತಿವೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನ ಒದಗಿಸಬೇಕಿದೆ.

 

Share This Article
Leave a Comment

Leave a Reply

Your email address will not be published. Required fields are marked *