ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ

Public TV
1 Min Read

ಬೆಳಗಾವಿ(ಚಿಕ್ಕೋಡಿ): ಲಾಕ್‍ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟದಲ್ಲಿ ಇರುವ ಬಡವರಿಗೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಹಾಯ ಹಸ್ತ ಚಾಚಿದ್ದಾರೆ.

ಉಮೇಶ್ ಕತ್ತಿ ಅವರು ತಮ್ಮ ತಂದೆ ವಿಶ್ವನಾಶ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಅವರ ಸ್ಮರಣಾರ್ಥ ಹುಕ್ಕೇರಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಸಾಂಕೇತಿಕವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು.

ಹುಕ್ಕೇರಿ ತಾಲೂಕಿನಲ್ಲಿ ಗುರುತಿಸಲಾದ ಒಟ್ಟು 5,500 ಕುಟುಂಬಗಳಿಗೆ 17 ಟನ್ ಜೋಳ, 17 ಟನ್ ಗೋದಿ ಹಿಟ್ಟು, 11 ಟನ್ ರವಾ, 11 ಟನ್ ಅಡುಗೆ ಎಣ್ಣೆ, ಹೆಸರುಕಾಳು 5.5 ಟನ್, 25 ಸಾವಿರ ಮಾಸ್ಕ ಹಾಗೂ 2,500 ಲೀಟರ್ ಸ್ಯಾನಿಟೈಸರ್ , 16,500 ಸೋಪುಗಳನ್ನ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಗಳ ಮೂಲಕ ನೀಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ 3 ಕೆಜಿ ಜೋಳ, 3 ಕೆಜಿ ಗೋದಿ ಹಿಟ್ಟು, 2 ಲೀಟರ್ ಅಡುಗೆ ಎಣ್ಣೆ, 2 ಕೆಜಿ ರವಾ, ಒಂದು ಕೆಜಿ ತೊಗರಿ ಬೇಳೆ, ಒಂದು ಕೆಜಿ ಹೆಸರು ಕಾಳು, 5 ಮಾಸ್ಕ, ಅರ್ಧ ಲೀಟರ್ ಸ್ಯಾನಿಟೈಸರ್ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕತ್ತಿ, ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿ ಇರುವ ಬಡವರನ್ನ ಗುರತಿಸಿ ದಿನಸಿ ಸಾಮಗ್ರಿಗಳನ್ನ ನೀಡಲಾಗುತ್ತಿದೆ. ಈಗಾಗಲೇ ಒಂದು ತಿಂಗಳು ಲಾಕ್‍ಡೌನ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ಬಡವರು ಹಸಿವಿನಿಂದ ಬಳಲಬಾರದು. ಹೀಗಾಗಿ ಉಚಿತವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚನ್ನಪ್ಪ ಗಜಬರ, ಜಯಗೌಡ ಪಾಟೀಲ್, ಗುರು ಕುಲಕರ್ಣಿ, ಜಯಸಿಂಗ್, ಸದಾ ಮರಬಸ್ಸನವರ, ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ, ತಹಶೀಲ್ದಾರ್ ಅಶೋಕ್ ಗುರಾಣಿ, ಬಸವರಾಜ್ ಮರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *