ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ

Public TV
1 Min Read

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಕೇಂದ್ರದ ಬಿಜೆಪಿ ನಾಯಕಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಈ ಕುರಿತು ಆಂಗ್ಲ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧನಾತ್ಮಕ ವಾತಾವರಣವನ್ನು ರೂಪಿಸುವ ಅಗತ್ಯತೆ ಇದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಅಲ್ಲದೇ ನಾನು ತಾತ್ಕಾಲಿಕವಾಗಿ ಸಕ್ರೀಯ ರಾಜಕಾರಣದಿಂದ ದೂರವಿದ್ದು, ರಾಮಮಂದಿರ ನಿರ್ಮಾಣ ಮತ್ತು ಗಂಗಾ ಶುದ್ಧೀಕರಣ ವಿಷಯದಲ್ಲಿ ತೊಡಗಿಕೊಳ್ಳುತ್ತೇನೆಂದು ಹೇಳಿದ್ದಾರೆ.

2019ರ ಜನವರಿಯಿಂದ ಒಂದೂವರೆ ವರ್ಷಗಳ ಕಾಲ ಗಂಗಾ ಯಾತ್ರೆಯಲ್ಲಿ ತೊಡಗಿಕೊಳ್ಳುತ್ತೇನೆ. ಈ ಅವಧಿಯಲ್ಲಿ ವಿವಿಧೆಡೆ ಗಂಗಾನದಿಯ ತಟದಲ್ಲೇ ವಾಸ್ತವ್ಯ ಹೂಡಲಿದ್ದೇನೆ. ನನ್ನ ಈ ಕೋರಿಕೆಯನ್ನು ಪಕ್ಷದ ವರಿಷ್ಠರಿಗೆ ತಿಳಿಸಿ, ಅನುಮತಿಗಾಗಿ ಮನವಿ ಮಾಡಿಕೊಂಡಿದ್ದೇನೆಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ ಮಹಿಳಾ ನಾಯಕಿಯಾಗಿ ಹಾಗೂ ಕೇಂದ್ರ ವಿದೇಶಾಂಗ ಇಲಾಖೆ ಸಚಿವರಾಗಿರುವ ಸುಷ್ಮಾ ಸ್ವರಾಜ್ ರವರು ತಮ್ಮ ಅನಾರೋಗ್ಯದ ಕಾರಣದಿಂದ ಮುಂಬರುವ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದರು. ಈಗ ಉಮಾಭಾರತಿಯವರೂ ಸಹ ಚುನಾವಣೆಯಿಂದ ಹಿಂದೆ ಸರಿದಿರುವುದು ಬಿಜೆಪಿಯ ಮಹಿಳಾ ಘಟಕದ ಬಲ ಕುಂದುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *