ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ

Public TV
1 Min Read

ಬೆಂಗಳೂರು: ಇಂದು ಎಲ್ಲಾ ಕಡೆಯೂ ಯುಗಾದಿ ಹಬ್ಬದ್ದೇ ಝೇಂಕಾರ. ಎತ್ತ ನೋಡಿದರತ್ತ ಹಸಿರು-ತೋರಣದ ಸೊಬಗು. ಎರಡು ದಿನ ಹಬ್ಬವಿದ್ದು, ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಇಂದು ಚೈತ್ರ ಮಾಸದ ಹಬ್ಬ. ಪ್ರಕೃತಿಯು ಮೈ ಕೊಡವಿ, ಹಸಿರನ್ನುಟ್ಟು ಅಪ್ಸರೆಯಂತೆ ಮೆರೆಯುವ ಸವಿಗಾಲ. ಇಂದು ಹಬ್ಬದ ಮೊದಲ ದಿನ ಅಮವಾಸ್ಯೆಯನ್ನು ನಗರದೆಲ್ಲೆಡೆ ಶಾಸ್ತ್ರೋಕ್ತವಾಗಿ ಆಚರಿಸಲಾಯಿತು. ಮನೆ ಮಂದಿಯೆಲ್ಲ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಪೂಜೆ ಮಾಡಿ ಹೊಸ ಸಂವತ್ಸರವನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿದರು. ಇದನ್ನೂ ಓದಿ: ಬೇವು-ಬೆಲ್ಲ ತಿಂದು ಯುಗಾದಿಯ ವಿಶೇಷತೆ ತಿಳಿಯಿರಿ

ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬಂತೆ ಮೂರು ತಲೆಮಾರಿನ ಜನರೆಲ್ಲಾ ಹಬ್ಬದಲ್ಲಿ ಒಂದೆಡೆ ಸೇರಿದರು. ಕಷ್ಟ-ಸುಖ ಎರಡರಲ್ಲೂ ಒಂದಾಗಿ ಇರುತ್ತೇವೆ ಎಂದು ಬೇವು-ಬೆಲ್ಲ ತಿಂದು ಇಂದು ಶುಭಾಶಯ ವಿನಿಮಯಗೊಳಿಸಿಕೊಂಡರು. ಹೆಣ್ಮಕ್ಕಳೆಲ್ಲ ಒಂದೆಡೆ ಸೇರಿ ಭೂಮಿ-ಭಾನು ಒಂದು ಮಾಡಿದರು. ಇದನ್ನೂ ಓದಿ:  ಯುಗಾದಿ ಸ್ಪೆಷಲ್: ಬೇವು-ಬೆಲ್ಲ ಮಾಡುವ ವಿಧಾನ

ಈ ಸಡಗರಕ್ಕೆ ಒಬ್ಬಟ್ಟಿನ ಗಮ್ಮತ್ತು ಸಹ ಇತ್ತು. ಪುಟಾಣಿಗಳ ಹೊಸ ಉಡುಗೆಗಳ ಹೊಂಬಣ್ಣ, ಹೆಂಗಳೆಯರ ರೇಷ್ಮೆ ಸೀರೆ, ಗಾಜಿನ ಬಳೆಗಳು ನವೋಲ್ಲಾಸ ಮೂಡಿಸಿದವು. ಹೊಸ ಬಟ್ಟೆ ಧರಿಸಿ ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ನವ ಸಂವತ್ಸರಕ್ಕೆ ನಾಂದಿ ಹಾಡಿದರು.

Share This Article
Leave a Comment

Leave a Reply

Your email address will not be published. Required fields are marked *