ಬಿಜೆಪಿಯದ್ದು ಡೋಂಗಿ ಹಿಂದುತ್ವ- ಕಾಂಗ್ರೆಸ್‍ಗೆ ಈಗ ಹಿಂದೂಗಳು ಕಾಣಿಸ್ತಿದ್ದಾರೆ: ಪ್ರಮೋದ್ ಮುತಾಲಿಕ್

Public TV
1 Min Read

ಉಡುಪಿ: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂದುತ್ವದ ಮೇಲೆ ಸವಾರಿ ಮಾಡಿ ಅಧಿಕಾರ ಗಿಟ್ಟಿಸುವ ಗುರಿ ಹೊಂದಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

ಇಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಹತ್ಯೆಯನ್ನು ಬಿಜೆಪಿ ನಿಷೇಧ ಮಾಡಿಲ್ಲ. ನನ್ನ ಮೇಲೆ 7 ಕೇಸು ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಕಾರ್ಯಕರ್ತರು ಸತ್ತರೆ ಒಮ್ಮೆ ಕಣ್ಣೀರಿಡುವ ನಾಯಕರು, ಕೋರ್ಟ್ ಗೆ ಅಲೆದಾಡುವ ಕಾರ್ಯಕರ್ತರ ಬಗ್ಗೆ ಯಾರಿಗೂ ಚಿಂತೆಯೇ ಇಲ್ಲ. ಕಾಂಗ್ರೆಸ್ ನ ಮುಸ್ಲಿಂ ತುಷ್ಟೀಕರಣದಿಂದ ದೇಶದಲ್ಲಿ ಭಯೋತ್ಪಾಧನೆ ಹುಟ್ಟಿತು. ಕಾಂಗ್ರೆಸ್ ದೇಶದಲ್ಲಿ ಧೂಳೀಪಟವಾದ ಮೇಲೆ ಈಗ ಹಿಂದೂಗಳು ನೆನಪಾಗಿದ್ದಾರೆ. ರಾಹುಲ್ ಗಾಂಧಿಯ ದೇವಸ್ಥಾನ ಮಠ ಮಂದಿರದ ಭೇಟಿ ರಾಜಕೀಯ ಅಲ್ಲದೆ ಮತ್ತೇನೂ ಅಲ್ಲ. ಈ ವರೆಗೆ ಹಿಂದೂಗಳ ಕಡೆ ತಿರುಗಿಯೂ ನೋಡದ ಕಾಂಗ್ರೆಸ್ ಪಕ್ಷದಲ್ಲಿ ಈಗ ಯಾಕೆ ಇಷ್ಟೊಂದು ಬದಲಾವಣೆ ಎಂದು ಪ್ರಶ್ನಿಸಿದರು.

ಶ್ರೀರಾಮ ಸೇನೆ, ಶಿವಸೇನೆ ಜೊತೆ ಕೈ ಜೋಡಿಸಿದ್ದು 52 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಶೃಂಗೇರಿ ಅಥವಾ ತೆರದಾಳುವಿನಲ್ಲಿ ತಾನು ಸ್ಪರ್ಧಿಸುವುದಾಗಿ ಮುತಾಲಿಕ್ ಘೋಷಿಸಿದರು. ಕಾರ್ಯಕರ್ತರು ಎರಡೂ ಕಡೆಯಿಂದ ಒತ್ತಡ ತರುತ್ತಿದ್ದಾರೆ. ಯಾವುದು ಸೂಕ್ತ ಎಂದು ನಿರ್ಧರಿಸಿ ಸ್ಪರ್ಧಿಸುವುದಾಗಿ ಹೇಳಿದರು. ಶಿವಸೇನೆಯಿಂದ ಕನ್ನಡಕ್ಕೆ ಯಾವುದೇ ಹೊಡೆತ ಬೀಳುವುದಿಲ್ಲ ಎಂದು ಆಶ್ವಾಸನೆ ನೀಡಿದ ಅವರು ಬಿಜೆಪಿಯದ್ದು ಡೋಂಗಿ ಹಿಂದುತ್ವ- ನಮ್ಮದು ಪ್ರಖರ ಹಿಂದುತ್ವ, ಬಿಜೆಪಿಯ ಸೊಕ್ಕಿಗೆ ಶಿವಸೇನೆ ಉತ್ತರ ನೀಡುತ್ತದೆ ಎಂದರು.

ಇದೇ ವೇಳೆ ಬಿಜೆಪಿ ಜೊತೆ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು, ಈ ಹಿಂದೆಯೇ ಬಿಜೆಪಿಯ ಬಾಗಿಲು ಬಂದ್ ಮಾಡಲಾಗಿದೆ. ಇನ್ನು ಕದ ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *