ಒಂದೇ ಕಲ್ಲಿನಲ್ಲಿ ಎರಡು ಪ್ರಕರಣಗಳನ್ನು ಹೊಡೆದುರುಳಿಸಿದ ಉಡುಪಿ ಪೊಲೀಸ್

Public TV
2 Min Read

ಉಡುಪಿ: ಒಂದೇ ರಾತ್ರಿ ನಡೆದ ಎರಡು ಪ್ರಕರಣಗಳನ್ನು ಒಂದೇ ಕಲ್ಲಿನಲ್ಲಿ ಪೊಲೀಸರು ಹೊಡೆದು ಉರುಳಿಸಿದ್ದಾರೆ. ಕೋಮು ಸೂಕ್ಷ್ಮ ಪ್ರಕರಣವನ್ನು ಎರಡು ದಿನಗಳ ಒಳಗೆ ಭೇದಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿಯ ಹನೀಫ್ ಮರ್ಡರ್ ಮತ್ತು ಆದಿ ಉಡುಪಿ ಮಸೀದಿ ಕಲ್ಲೆಸೆದ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ.

ಜನವರಿ 29 ರಂದು ಆದಿ ಉಡುಪಿಯ ನೂರಾಲ್ ಮಸೀದಿಗೆ ರಾತ್ರಿ 12 ಗಂಟೆಯ ನಂತರ ಕಲ್ಲು ಬಿದ್ದಿತ್ತು. ದುಷ್ಕರ್ಮಿಯೊಬ್ಬ ಮಸೀದಿಗೆ ಕಲ್ಲೆಸೆದು ಪರಾರಿಯಾಗಿದ್ದ. ಇದಾಗಿ ಮುಕ್ಕಾಲು ಗಂಟೆಯೊಳಗೆ ಕರಾವಳಿ ಬೈಪಾಸಿನಲ್ಲಿ ಒಂದು ಕೊಲೆಯಾಗಿತ್ತು. ಮತ್ತೊಂದು ಕೊಲೆಯತ್ನ ನಡೆದಿತ್ತು. ಎರಡೂ ಘಟನೆಗಳು ನಡೆದದ್ದು ಜನವರಿ 29ರಂದು. ಎರಡೂ ಪ್ರಕರಣದಲ್ಲಿ ಆರೋಪಿ ಪರಾರಿಯಾಗಿದ್ದ.

ಆರೋಪಿ ಅಂಕಿತ್ ಕುಂಪಲ

ಹೈವೇ ಗಲಾಟೆಯಲ್ಲಿ ಆಟೋ ಚಾಲಕ ಹನೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಎರಡೂ ಘಟನೆಗಳು ಕೋಮು ಸೂಕ್ಷ್ಮವಾಗಿದ್ದರಿಂದ ಪೊಲೀಸರು ರಾತ್ರೋ ರಾತ್ರಿ ಕಾರ್ಯಪ್ರವೃತ್ತರಾಗಿದ್ದರು. ಘಟನೆ ನಡೆದು 48 ಗಂಟೆಗಳ ಒಳಗೆ ಎರಡೂ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಂಕಿತ್ ಕುಂಪಲ ಎಂಬತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊದಲು ಮಸೀದಿಗೆ ಕಲ್ಲೆಸೆದು ನಂತರ ಆರೋ ಚಾಲಕನ ಜೊತೆ ಜಗಳವಾಡಿ ತನ್ನ ಜೊತೆಯಲ್ಲಿದ್ದ ಚಾಕುವಿನಿಂದ ಇರಿದಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಉಡುಪಿಯಲ್ಲಿ ಎಎಸ್‍ಪಿ ವಿಷ್ಣುವರ್ಧನ್ ಪ್ರೆಸ್ ಮೀಟ್ ಮಾಡಿದರು.

ಮೊದಲು ಮಸೀದಿಗೆ ಕಲ್ಲೆಸೆದು ಅಂಕಿತ್ ತನ್ನ ಸ್ಟಾರ್ ಸಿಟಿ ಬೈಕ್‍ನಲ್ಲಿ ಪರಾರಿಯಾಗಿದ್ದ. ಅಲ್ಲಿಂದ ಹೈವೇಗೆ ಬಂದಾಗ ಅಲ್ಲಿ ಆಟೋ ವನ್ ವೇಯಲ್ಲಿ ಬಂದಿದೆ. ಬೈಕ್ ಅಡ್ಡಗಟ್ಟಿ ಚಾಲಕನ ಜೊತೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಅಂಕಿತ್ ಹನೀಫ್‍ಗೆ ಇರಿದಿದ್ದ. ಜಗಳ ಬಿಡಿಸಲು ಬಂದ ಹನೀಫ್ ಸಂಬಂಧಿ ಶಬ್ಬೀರ್‍ಗೂ ಚೂರಿ ಅಂಕಿತ್ ಇರಿದು ಪರಾರಿಯಾಗಿದ್ದ.

ಆರೋಪಿ ಅಂಕಿತ್ ಕುಂಪಲ

ಎರಡೂ ಪ್ರಕರಣಗಳಿಗೆ ತಲಾ ನಾಲ್ಕು ತಂಡಗಳನ್ನು ಪೊಲೀಸರು ರಚನೆ ಮಾಡಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಮಾಹಿತಿಗಳು ಸಿಗಲಾರಂಬಿಸಿತು. ಅಂಕಿತ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕೇಸುಗಳಿವೆ. ಉಳ್ಳಾಲದಲ್ಲಿ ಮಸೀದಿಗೆ ಕಲ್ಲೆಸೆತ, ಗುಂಪು ಘರ್ಷಣೆಯಲ್ಲಿ ಅಂಕಿತ್ ಫೇಮಸ್ ಆಗಿದ್ದನಂತೆ. ಗುಂಪು ಗಲಾಟೆಗಳು ಜಾಸ್ತಿಯಾದಾಗ ತನ್ನ ಮನೆಯಿಂದ ದೊಡ್ಡಮ್ಮನ ಉಡುಪಿಯ ಮನೆಗೆ ಬಂದಿದ್ದ ಎನ್ನಲಾಗಿದೆ. ಇಲ್ಲೂ ತನ್ನ ಕೂಟವನ್ನು ಬೆಳೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಸೀದಿಗೆ ಕಲ್ಲೆಸೆದ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರಿಗೆ ಮರ್ಡರ್ ಆರೋಪಿಯೂ ಸಿಕ್ಕಿಬಿದ್ದ. ಈ ಮೂಲಕ ಪ್ರಕರಣ ಕೋಮುಸೂಕ್ಷ್ಮತೆಯತ್ತ ವಾಲುವ ಮೊದಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಪತ್ತೆಯ ಜವಾಬ್ದಾರಿಯನ್ನು ಉಡುಪಿ ಡಿವೈಎಸ್‍ಪಿ ಕುಮಾರಸ್ವಾಮಿ ಮತ್ತು ಟೀಂ ಹೊತ್ತಿತ್ತು. ಉಡುಪಿ ನಗರ, ಬ್ರಹ್ಮಾವರ ಡಿಸಿಐಬಿ, ಮಣಿಪಾಲ ಪೊಲೀಸರು ಸಾಥ್ ಕೊಟ್ಟಿದ್ದಾಗಿ ಎಎಸ್‍ಪಿ ವಿಷ್ಣುವರ್ಧನ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *