ಅಭಿವೃದ್ಧಿ ಹಾಗೂ ಅಪಪ್ರಚಾರದ ನಡುವಿನ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ – ಕೋಟ

Public TV
1 Min Read

– ಜೆಡಿಎಸ್‍ನ ಕಣ್ಣೀರಿಗೆ ಉತ್ತರ ಕೊಟ್ಟಿದ್ದೇವೆ

ಉಡುಪಿ: ಉಪಚುನಾವಣೆ ಗೆಲುವು ನಮಗೆ ಹರ್ಷ ತಂದಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರದ ನಡುವಿನ ಚುನಾವಣೆ ಆಗಿತ್ತು. ಸಿಎಂ ಯಡಿಯೂರಪ್ಪನವರ ಅವಿರತ ಹೋರಾಟದಿಂದ 12 ಕಡೆ ಬಿಜೆಪಿ ಗೆದ್ದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರ್ಕಾರ ಬಂದಿದೆ. ಮೂರೂವರೆ ವರ್ಷ ಪರಿಣಾಮಕಾರಿ ಆಡಳಿತ ಕೊಡುತ್ತೇವೆ ಎಂದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಗೆಲುವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ತೀರ್ಮಾನವನ್ನು ಗೌರವದಿಂದ ಸ್ವೀಕರಿಸಿದ್ದೇವೆ. ಮುಂದೆ ಏನು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದ ಶರತ್ ಬಚ್ಚೇಗೌಡ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ ಎಂದ ಕೋಟ, ಕಣ್ಣೀರು ಹಾಕಿದರೆ ಕೇಕೆ ಹಾಕಿದರೆ ಗೆಲುವು ಸಿಗಲ್ಲ. ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು. ಬಿಜೆಪಿ ಮತ್ತು ಬಿಎಸ್‍ವೈ ಅವರನ್ನು ಟೀಕಿಸುವವರು ಇನ್ನಾದರು ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಯಡಿಯೂರಪ್ಪ ಪುತ್ರ ವಿಜಯೇಂದ್ರ, ಡಿಸಿಎಂ ಅಶ್ವಥನಾರಾಯಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಓಡಾಟ ಮಾಡಿ ಕೆ.ಆರ್ ಪೇಟೆಯಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿದ್ದಾರೆ ಎಂದರು.

ಬಿಜೆಪಿ ಮಂತ್ರಿಮಂಡಲದ ವಿಸ್ತರಣೆಯಾಗುತ್ತದೆ. ಸಾಕಷ್ಟು ಸಚಿವ ಸ್ಥಾನಗಳು ಖಾಲಿಯಿವೆ. ಮುಖ್ಯಮಂತ್ರಿಗಳ ಬಳಿ ಹಲವು ಖಾತೆಗಳಿವೆ. ಗೆದ್ದು ಬಂದವರಿಗೆ ಅವಕಾಶ ಕೊಡಲು ಸಿಎಂ ಖಾತೆ ಉಳಿಸಿಕೊಂಡಿದ್ದಾರೆ. ಸೂಕ್ಷ್ಮವಾಗಿ, ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚಿಕೆ ಮಾಡುತ್ತಾರೆ. ಕೇಂದ್ರದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಡೀ ಪಕ್ಷವನ್ನು ಒಟ್ಟಾಗಿ ಒಂದಾಗಿ ತೆಗೆದುಕೊಂಡು ಹೋಗುವ ಸಚಿವರ ತಂಡ ರಚನೆಯಾಗುತ್ತದೆ. ರಾಜ್ಯಾಧ್ಯಕ್ಷರು, ಸಿಎಂ, ಹೈಕಮಾಂಡ್ ತೀರ್ಮಾನಕ್ಕೆ ಇಡೀ ರಾಜ್ಯ ಬದ್ಧವಾಗಿರಬೇಕು ಎಂದು ಪಕ್ಷದೊಳಗೆ ತೀರ್ಮಾನವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *