ಚಿಕಿತ್ಸೆಗೆ ಸ್ಪಂದಿಸ್ತಿರುವ ಪೇಜಾವರ ಶ್ರೀಗಳು- ಆರೋಗ್ಯ ವಿಚಾರಿಸಿದ ನಿರ್ಮಲಾ

Public TV
1 Min Read

ಉಡುಪಿ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಗಳಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಚಿಕಿತ್ಸೆ ಮುಂದುವರಿದಿದೆ.

ಐಸಿಯುನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈ ಮಧ್ಯೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೋನ್ ಕರೆ ಮಾಡಿ, ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ತುರ್ತು ನೆರವು ಅಗತ್ಯವಿದ್ದಲ್ಲಿ ತಿಳಿಸುವಂತೆ ಪೇಜಾವರಶ್ರೀ ಆಪ್ತಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಶುಕ್ರವಾರ ಕೆಎಂಸಿ ಮಣಿಪಾಲದ ಹಿರಿಯ ವೈದ್ಯೆ ಡಾ. ಸುಧಾ ವಿದ್ಯಾಸಾಗರ್ ದಿನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ, ಉಸಿರಾಟದ ಸಮಸ್ಯೆಯಿಂದ ಸ್ವಾಮೀಜಿ ಕೆಎಂಸಿಗೆ ಬೆಳಗ್ಗೆ ದಾಖಲಾಗಿದ್ದರು. ಈಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವಾಗ ಬಹಳ ಸಮಸ್ಯೆಯಿತ್ತು ಎಂದು ಹೇಳಿದರು. ಶ್ರೀಗಳಿಗೆ ವೆಂಟಿಲೇಟರ್ ಅಳವಡಿಸಿದ್ದೇವೆ, ಚೇತರಿಸಿಕೊಳ್ಳಲು ಮದ್ದುಗಳನ್ನು ಹಾಕಿರುವುದರಿಂದ ಅಮಲಿನಲ್ಲಿದ್ದಾರೆ ಎಂದು ತಿಳಿಸಿದ್ದರು.

ಪೇಜಾವರ ಶ್ರೀಗಳಿಗೆ ಕೆಎಂಸಿಯ ಆರು ತಜ್ಞ ವೈದ್ಯರಿಂದ ಚಿಕಿತ್ಸೆ ಸಿಗುತ್ತಿದೆ. ಡಾ. ಸುಧಾ ವಿದ್ಯಾಸಾಗರ್ ವೈದ್ಯರ ತಂಡದ ನೇತೃತ್ವ ವಹಿಸಿದ್ದು, ರವಿರಾಜ್ ಆಚಾರ್ಯ, ಡಾ. ಶ್ವೇತಪ್ರಿಯ, ಡಾ. ಮಂಜುನಾಥ ಹಂದೆ, ಡಾ. ಪದ್ಮಕುಮಾರ್, ಡಾ. ವಿಶಾಲ್ ಶಾನುಭೋಗ್ ಅವರು 24 ಗಂಟೆ ನಿಗಾ ವಹಿಸಲಿದ್ದಾರೆ. ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಶ್ರೀಗಳ ಚಿಕಿತ್ಸೆಯ ಸಂಪೂರ್ಣ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *