ಉಡುಪಿ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣ- ಏಳು ಮಂದಿ ಚಿನ್ನ ಚೋರರು ಅಂದರ್!

Public TV
2 Min Read

ಉಡುಪಿ: ಭಾರೀ ಕುತೂಹಲ ಕೆರಳಿಸಿದ್ದ ಇಲ್ಲಿನ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಮತ್ತು ದರೋಡೆ ಕೇಸನ್ನು ಪೊಲೀಸರು ಬೇಧಿಸಿದ್ದಾರೆ. ಒಂದೂವರೆ ಕೆಜಿ ಚಿನ್ನದ ಜೊತೆ ಎರಡೂವರೆ ಲಕ್ಷ ರೂಪಾಯಿ ದೋಚಿ ತಲೆಮರೆಸಿಕೊಂಡಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಚಿನ್ನದ ವ್ಯಾಪಾರಿ ಅಂತ ಪೊಲೀಸರ ಎದುರು ಪೋಸು ನೀಡಿದ್ದ ವ್ಯಕ್ತಿ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಿನ್ನದೊಂದಿಗೆ ಚಿನ್ನದ ವ್ಯಾಪಾರಿಯ ಕಿಡ್ನಾಪ್ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ. ಕೇರಳದ ತ್ರಿಶೂರ್ ನ ಚಿನ್ನದ ವ್ಯಾಪಾರಿ ದಿಲೀಪ್ ದರೋಡೆ ಮಾಡಿದ ಕೇಸಲ್ಲಿ ಏಳು ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ.

ಏನಿದು ಪ್ರಕರಣ?: ಮಾರ್ಚ್ 17ರಂದು ಉಡುಪಿಯ ಪೆರ್ಡೂರಿನ ಗಾಯತ್ರಿ ಜ್ಯುವೆಲ್ಲರ್ಸ್‍ಗೆ ಚಿನ್ನದ ಆಭರಣಗಳನ್ನು ಕೊಟ್ಟು ಚಿನ್ನದ ವ್ಯಾಪಾರಿ ಉಡುಪಿ ನಗರಕ್ಕೆ ಬರ್ತಾಯಿದ್ರು. ದಿಲೀಪ್ ಪ್ರಯಾಣ ಮಾಡುತ್ತಿದ್ದ ಬಸ್ಸನ್ನು ಹತ್ತಿದ ದುಷ್ಕರ್ಮಿಗಳು ತಲೆಗೆ ಪಿಸ್ತೂಲ್ ಹಿಡಿದು ಬಸ್ಸಿನಿಂದ ಕೆಳಗೆ ಇಳಿಸಿದ್ದಾರೆ. ಬಳಿಕ ಸುಮಾರು 40 ಕಿಲೋಮೀಟರ್ ದೂರದ ಪಡುಬಿದ್ರೆ ಎಂಬಲ್ಲಿಗೆ ದಿಲೀಪ್‍ರನ್ನು ಕರೆದುಕೊಂಡು ಹೋಗಿ ಚಿನ್ನದ ಜೊತೆ ಸುಮಾರು ಎರಡೂವರೆ ಲಕ್ಷ ರೂಪಾಯಿಯನ್ನು ಕಸಿದುಕೊಂಡು ವ್ಯಾಪಾರಿಯನ್ನು ಪೊದೆಗೆ ಎಸೆದು ಪರಾರಿಯಾಗಿದ್ದರು. ಚಿನ್ನದ ಜೊತೆ ಹಣವನ್ನು ಕಳೆದುಕೊಂಡ ದಿಲೀಪ್ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಚಿನ್ನ ದೋಚಿ ಬಿಟ್ಟು ಪರಾರಿಯಾದ ಸ್ಥಳವನ್ನು ಪಡುಬಿದ್ರೆ ಮತ್ತು ಕಾಪು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆರ್ಡೂರಿನ ಹರಿಕೃಷ್ಣ ಭಟ್ ದರೋಡೆಯ ಪ್ರಮುಖ ಆರೋಪಿ ಆರೋಪಿಯಾಗಿದ್ದು, ಕಿಡ್ನ್ಯಾಪ್‍ಗೆ ಸಹಕರಿಸಿದ ಕುಂದಾಪುರದ ಜಾವೆದ್, ಅಶ್ರಫ್, ಇಲಾಹಿತ್, ರವಿಚಂದ್ರ, ಸುಮಂತ್ ನನ್ನು ಅರೆಸ್ಟ್ ಮಾಡಿದ್ದಾರೆ.

ಹರಿಕೃಷ್ಣ ಎಂಬುವವನ ಜ್ಯುವೆಲ್ಲರಿ ಶಾಪ್‍ಗೆ ದಿಲೀಪ್ ಹಲವಾರು ವರ್ಷಗಳಿಂದ ಚಿನ್ನದಾಭರಣಗಳನ್ನು ಸಪ್ಲೈ ಮಾಡ್ತಾಯಿದ್ದ. ಈ ಬಾರಿ ಆತನನ್ನೇ ದರೋಡೆ ಮಾಡಲು ಯತ್ನಿಸಲಾಯ್ತು. ಆದ್ರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಪ್ರಕರಣ ಹೊರಗೆ ಬಂತು. ಇದರ ಜೊತೆ ಕಾನೂನು ಬಾಹಿರವಾಗಿ ಯಾವುದೇ ಬಿಲ್ ಇಲ್ಲದ, ಟ್ಯಾಕ್ಸ್ ಕಟ್ಟದ ಚಿನ್ನಾಭರಣಗಳನ್ನು ಮಾರಾಟ ಮಾಡುವುದು ಅಪರಾಧ. ಹೀಗಾಗಿ ಕೇರಳ ಮೂಲದ ವ್ಯಕ್ತಿಯ ಮೇಲೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ ಬಾಲಕೃಷ್ಣ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

ಕೂತಲ್ಲೇ ಸುಲಭದಲ್ಲಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ಬಹುದು ಎಂಬ ಉದ್ದೇಶದಿಂದ ಆರೋಪಿಗಳೆಲ್ಲಾ ಸ್ಕೆಚ್ ಹೆಣೆದಿದ್ದರು. ಪ್ರಕರಣದಲ್ಲಿ ಇನ್ನಷ್ಟು ಮಂದಿ ಕೈವಾಡವಿದ್ದು ಐಡಿಯಾ ಕೊಟ್ಟು ಪ್ಲ್ಯಾನ್ ರೂಪಿಸಿದ್ದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರ ತಂಡ ಆ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *