ಸಮುದ್ರದಲ್ಲಿ ಅಡುಗೆ ಮಾಡಿ ಜನತಾ ಕರ್ಫ್ಯೂಗೆ ಬೆಂಬಲಿಸಿದ ಮಲ್ಪೆ ಮೀನುಗಾರರು

Public TV
1 Min Read

ಉಡುಪಿ: ಭೂಮಿಯ ಮೇಲೆ ವಾಸಿಸುವವರು ಜನತಾ ಕರ್ಫ್ಯೂಗೆ ಫುಲ್ ಸಪೋರ್ಟ್ ಮಾಡಿದ್ದಾರೆ. ಸಮುದ್ರವನ್ನೇ ಮನೆ ಮಾಡಿಕೊಂಡವರು ಕೂಡ ತಮ್ಮ ಕಸುಬು ಬಂದ್ ಮಾಡಿ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

ಉಡುಪಿ ಸಂಪೂರ್ಣ ಬಂದ್ ಆಗಿರುವುದರಿಂದ ಸಾರ್ವಜನಿಕರು ಹೋಟೆಲ್ ಅಂಗಡಿಗಳು ಇಲ್ಲದೆ ಬೆರಳೆಣಿಕೆಯ ಜನ ಸಮಸ್ಯೆಗಳನ್ನು ಎದುರಿಸಿದರು. ಹೇಗೋ ಮಾಡಿ ಬೆಳಗಿನ ತಿಂಡಿ ಮಧ್ಯಾಹ್ನದ ಊಟವನ್ನು ಪೂರೈಸಿದ್ದಾರೆ. ಆದರೆ ಹೋಟೆಲ್ ಅಂಗಡಿಗಳು ಇಲ್ಲದೆ ಸಮುದ್ರದಲ್ಲಿ ಕಸುಬು ಮಾಡುವವರು ಏನು ಮಾಡಬೇಕು. ಮೀನುಗಾರಿಕೆ ಮಾಡುವವರು ಭಾನುವಾರವನ್ನು ಸಂಪೂರ್ಣವಾಗಿ ಸಮುದ್ರದಲ್ಲಿ ದೋಣಿ ಒಳಗೆ ಕಳೆದಿದ್ದಾರೆ.

ಬೆಳಗ್ಗೆಯಿಂದಲೇ ತಮ್ಮ ತಿಂಡಿ ಊಟ, ನಿದ್ದೆ, ಬಲೆಯನ್ನು ಹೆಣೆಯುವುದೂ ಎಲ್ಲವನ್ನು ದೋಣಿಯಲ್ಲೇ ಪೂರೈಸಿದ್ದಾರೆ. ಅರಬ್ಬಿ ಸಮುದ್ರದ ನೀರಿನಲ್ಲೇ ಭಾನುವರ ಕಳೆದ ಕಡಲ ಮಕ್ಕಳು ಪ್ರಧಾನಿ ಮೋದಿ ಕರೆಗೆ ಬೆಂಬಲ ಕೊಟ್ಟಿದ್ದಾರೆ.

ದೋಣಿಯೊಳಗೆ ಅಡುಗೆ ಮಾಡುತ್ತಿದ್ದ ದಿವಾಕರ್ ಕಾರ್ವಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಇವತ್ತು ಬಂದ್ ಇರುತ್ತದೆ ಎಂದು ನಮಗೆ ಮೊದಲೇ ಮಾಹಿತಿ ಇತ್ತು. ಹಾಗಾಗಿ ನಾವು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೆವು. ನಾವು ಮೀನುಗಾರಿಕೆಗೆ ಪಶ್ಚಿಮಕ್ಕೆ ಹೋಗುವಾಗ ಹತ್ತು ಹದಿನೈದು ದಿವಸದ ಎಲ್ಲ ತಯಾರಿಗಳನ್ನು ಮಾಡಿಕೊಂಡೆ ಹೋಗುತ್ತೇವೆ. ಸಮುದ್ರದ ನಡುವೆ ಅಡುಗೆ ಮಾಡಿ ಜೊತೆಗೆ ಕಸುವು ಮಾಡುತ್ತೇವೆ. ಆದರೆ ಈ ಭಾನುವಾರ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ ಬೋಟಿನ ಒಳಗೆ ಅಡುಗೆ ಮಾಡಿ ದಿನವನ್ನು ಕಳೆದೆವು ಎಂದು ಹೇಳಿದರು.

ಸದಾ ಗಿಜಿಗುಡುತ್ತಿರುವ ನೂರಾರು ಸಂಖ್ಯೆಯಲ್ಲಿ ಜನರು ಓಡಾಡುತ್ತಿರುವ ಮಲ್ಪೆ ಬಂದರು ಇವತ್ತು ಬಿಕೋ ಅನ್ನುತ್ತಿತ್ತು. ಮೀನುಗಳನ್ನು ಹೊರ ತಾಲೂಕು ಹೊರರಾಜ್ಯ ಜಿಲ್ಲೆಗಳಿಗೆ ಸಾಗಿಸುವ ಲಾರಿಗಳು ಬಂದರಿನಲ್ಲೇ ನಿಂತಿದ್ದವು. ಬಂದರಿನ ಒಳಗಿನ ಅಂಗಡಿಗಳು ಮಲ್ಪೆ ವ್ಯಾಪ್ತಿಯ ಎಲ್ಲ ವ್ಯಾಪಾರ ವಹಿವಾಟುಗಳು ಎಂದು ನಡೆಯಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *