ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ- ಉಡುಪಿ ಎಸ್‍ಪಿಗೆ ಶೋಭಾ ಕರಂದ್ಲಾಜೆ ಒತ್ತಾಯ

Public TV
1 Min Read

ಉಡುಪಿ: ದನದ ವ್ಯಾಪಾರಿ ಸಾವು ಪ್ರಕರಣದಲ್ಲಿ ಅಮಾಯಕರನ್ನು ಶಿಕ್ಷಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸಂಘಪರಿವಾರಕ್ಕೂ ವ್ಯಾಪಾರಿ ಸಾವಿಗೂ ಸಂಬಂಧವಿಲ್ಲ. ಪ್ರಕರಣ ಸಂಬಂಧ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ಇದರ ಹಿಂದೆ ಸಮ್ಮಿಶ್ರ ಸರ್ಕಾರದ ಕುಮ್ಮಕ್ಕು ಇದೆ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳನ್ನಷ್ಟೇ ತನಿಖೆಗೆ ಒಳಪಡಿಸಿ, ನಿರಪರಾಧಿ ಕಾರ್ಯಕರ್ತರನ್ನು ಹಿಂಸಿಸದೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ.

ಅಲ್ಲದೇ ದನ ಕಳ್ಳ ಸಾಗಣೆ ಸಂದರ್ಭ ಉಡುಪಿಯ ಪೆರ್ಡೂರಿನಲ್ಲಿ ಮಂಗಳೂರಿನ ಜೋಕಟ್ಟೆಯ ಹುಸೇನಬ್ಬ ಅನುಮಾನಾಸ್ಪದ ಸಾವನ್ನಪ್ಪಿದ್ದರು. ಹಿಂದೂ ಕಾರ್ಯಕರ್ತರು ದನಗಳ್ಳತನದ ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಈ ವೇಳೆ ಎಸ್‍ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದರೂ, ರಾಜ್ಯ ಸರ್ಕಾರ ಬಿಜೆಪಿ ಮತ್ತು ಸಂಘ ಪರಿವಾರದ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಇದನ್ನು ಓದಿ: ದನದ ವ್ಯಾಪಾರಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅವರು, ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಉಡುಪಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಹುಸೇನಬ್ಬ ಹೃದಯಾಘಾತದಿಂದ ಸಾವನ್ನಪ್ಪಿರಬಹುದು. ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಇದ್ದವು ಎಂಬ ಮಾಹಿತಿ ಇದೆ. ಮರಣೋತ್ತರ ಪರೀಕ್ಷೆ ಬಂದ ಮೇಲೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಹೇಳಿದರು. ಇದನ್ನು ಓದಿ:  ದನದ ವ್ಯಾಪಾರಿ ಅನುಮಾನಾಸ್ಪದ ಸಾವು ಪ್ರಕರಣ- ಹಿರಿಯಡ್ಕ ಎಸ್‍ಐ ಬಂಧನ

Share This Article
Leave a Comment

Leave a Reply

Your email address will not be published. Required fields are marked *