ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ: ಬಿಲ್ಲವ ಸಮುದಾಯ ಕಿಡಿ

Public TV
1 Min Read

ಉಡುಪಿ: ಕರಾವಳಿಯ ಪ್ರಬಲ ಬಿಲ್ಲವ ಸಮುದಾಯ ಬಿಜೆಪಿ ವಿರುದ್ಧ ಸಿಡಿದುಬಿದ್ದಿದೆ. ಜಿಲ್ಲಾಡಳಿತದ ಕಡೆಯಿಂದ ನಡೆದ ಗುರು ನಾರಾಯಣ ಜಯಂತಿಯಂದು ಈ ಕಿಡಿ ಹತ್ತಿಕೊಂಡಿದೆ. ಮುಂದಿನ ಚುನಾವಣೆಗೆ ಕಮಲದ ಕೈ ಹಿಡಿಯಲ್ಲ ಅಂತ ಬಿಲ್ಲವರು ಘೋಷಣೆ ಮಾಡಿದ್ದಾರೆ.

ಬಿಲ್ಲವ ಸಮುದಾಯ ಕರಾವಳಿಯ ಚುನಾವಣೆಯ ನಿರ್ಣಾಯಕ ಸಮುದಾಯ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರ ಪ್ರಭಾವ ಇದೆ. ಶೇಕಡಾ ಮೂವತ್ತರಷ್ಟು ಬಿಲ್ಲವ ಮತಗಳು ಇವೆ. ಬಿಜೆಪಿ 5 ಸ್ಥಾನಗಳನ್ನು ಕ್ಲೀನ್ ಸ್ವೀಪ್ ಮಾಡಲು ಬಿಲ್ಲವರು ಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಇಂತಹ ಪ್ರಬಲ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ ಎನ್ನಲಾಗುತ್ತಿದೆ. ಜಿಲ್ಲಾಡಳಿದ ನಾರಾಯಣ ಗುರು ಕಾರ್ಯಕ್ರಮಕ್ಕೆ ಐದೂ ಶಾಸಕರು ಗೈರಾಗಿದ್ದು ಬಿಲ್ಲವರನ್ನು ಕೋಪಗೊಳ್ಳುವಂತೆ ಮಾಡಿದೆ.

ಕಾಪು ವಿಶ್ವನಾಥ ಕ್ಷೇತ್ರದಲ್ಲಿ ಸಪ್ಟೆಂಬರ್ 13ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ನಡೆಯಿತು. ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಹೊರತುಪಡಿಸಿದರೆ ಯಾರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ ಗೈರಾಗಿದ್ದಾರೆ. ಸ್ಥಳೀಯ ಕಾಪು ಶಾಸಕ ಲಾಲಾಜಿ ಮೆಂಡನ್ ಕೂಡ ಕಾರ್ಯಕ್ರಮದಿಂದ ದೂರವಿದ್ದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ, ಜಾತಿ ರಾಜಕೀಯಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬಿಲ್ಲವರು ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಐದು ಶಾಸಕರನ್ನು ಬಿಟ್ಟು ಕೋಟ ಶ್ರೀನಿವಾಸ ಪೂಜಾರಿಗೆ ಸಚಿವ ಸ್ಥಾನ ಕೊಡಲಾಗಿದೆ. ಸಚಿವರು ಬಿಲ್ಲವ ಸಮುದಾಯಕ್ಕೆ ಸೇರಿದವರು. ಎರಡೂ ಜಿಲ್ಲೆಯ ಪ್ರತಿನಿಧಿಯಾಗಿ ಅವರನ್ನು ಆರಿಸಲಾಗಿದೆ. ಆದರೂ ನಿಮಗೆ ಅಸಮಾಧಾನವೇ ಅಂತ ಕರವಳಿಯಲ್ಲಿ ಜನ ಪ್ರಶ್ನೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *