ಚಲಿಸುತ್ತಿದ್ದ ಬಸ್ಸಿನಲ್ಲಿ ವಿಷಕುಡಿದ ತಮಿಳುನಾಡು ದಂಪತಿ- ಸಮಯಪ್ರಜ್ಞೆ ಮೆರೆದ ಉಡುಪಿ ಚಾಲಕ

Public TV
1 Min Read

ಉಡುಪಿ: ಚಲಿಸುತ್ತಿದ್ದ ಬಸ್ಸಿನಲ್ಲಿದ್ದ ದಂಪತಿ ಪ್ರಯಾಣದ ನಡುವೆ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಉಡುಪಿಯ ಬೈಂದೂರಲ್ಲಿ ನಡೆದಿದೆ. ಅಸ್ವಸ್ಥರನ್ನು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ಉಡುಪಿ ಜಿಲ್ಲಾ ಸರ್ಕಾರಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡು ಮೂಲದ, ಉಡುಪಿಯ ಅಂಲಪಾಡಿ ಸಮೀಪ ನೆಲೆಸಿರುವ ರಾಜಕುಮಾರ್ ಮತ್ತು ಸಂಗೀತಾ ವಿಷ ಕುಡಿದ ದಂಪತಿಗಳು. ರಾಜಕುಮಾರ್ ತಮಿಳಿನಲ್ಲಿ ಡೆತ್ ನೋಟ್ ಬರೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ರಾಜಕುಮಾರ್ ಹಾಗೂ ಸಂಗೀತ ಮಗುವಿನ ಜೊತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದರು. ದೇವರ ದರ್ಶನ ಪಡೆದು, ಅನ್ನ ಪ್ರಸಾದ ಸ್ವೀಕರಿಸಿದ ನಂತರ ಕೊಲ್ಲೂರು ಮಂಗಳೂರು ಬಸ್ ಏರಿದ್ದರು. ಬಸ್ ಹತ್ತಿದ ನಂತರವೋ ಬಸ್ ಏರುವ ಮುನ್ನ ವಿಷ ಸೇವಿಸಿದ್ದರೋ ಸರಿಯಾಗಿ ಮಾಹಿತಿಯಿಲ್ಲ. ಪತಿ, ಪತ್ನಿ ಸೀಟಿನಲ್ಲಿ ನರಳಾಡುತ್ತಿರುವುದನ್ನು ಮೊದಲು ನಿರ್ವಾಹಕ ಗಮನಿಸಿದ್ದರು.

ನಿರ್ವಾಹಕ ತಕ್ಷಣ ಚಾಲಕ ಇಕ್ಬಾಲ್ ಗಮನಕ್ಕೆ ತಂದಿದ್ದಾರೆ. ಚಾಲಕ ಬಸ್ಸನ್ನು ನಿಲ್ಲಿಸದೆ ನೇರ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತಂದಿದ್ದಾರೆ. ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಬಸ್ ಚಾಲಕ ಇಕ್ಬಾಲ್ ಮತ್ತು ನಿರ್ವಾಹಕ ಸತೀಶ್ ಸಮಯಪ್ರಜ್ಞೆಗೆ ವೈದ್ಯರು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಒಂದೂವರೆ ವರ್ಷದ ಮಗುವಿಗೂ ವಿಷ ಕುಡಿಸಿರುವ ಸಾಧ್ಯತೆಯಿದ್ದು, ಮಗುವನ್ನು ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *